ದಾವಣಗೆರೆ: ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ, ಯಾವುದೇ ನೇಮಕಾತಿಯೂ ನಡೆಯುತ್ತಿಲ್ಲ. ಇದು ಹೀಗೆ ಮುಂದುವರೆದರೆ ರಾಜ್ಯಕ್ಕೆ ನೇಪಾಳದಲ್ಲಾದ ಸ್ಥಿತಿ ಆಗುತ್ತದೆ ಎಂಬುದು ಎಚ್ಚರವಿರಲಿ ಎಂದು ಕಿಡಿಕಾರಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಯತ್ನಾಳ್, ಪೊಲೀಸ್ ನೇಮಕಾತಿ ವಿಳಂಬವಾಗುತ್ತಿದೆ. ಇಂದು ಧಾರವಾಡದಲ್ಲಿ ಪೊಲೀಸ್ ನೇಮಕಾತಿಗಾಗಿ 16 ಸಾವಿರಕ್ಕೂ ಹೆಚ್ಚು ಜನ ಯುವಕರು ಸೇರಿದ್ದಾರೆ. ನಾನು ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದೆ. ಸದನದಲ್ಲಿಯೂ ಕೂಡ ಕೇಳಿಕೊಂಡೆ. ಪೊಲೀಸ್ ನೇಮಕಾತಿಯಲ್ಲಿ ವಯಸ್ಸಿನ ಮಿತಿ ಸ್ವಲ್ಪ ಸಡಿಲಗೊಳಿಸಿ. ಈಗಾಗಲೇ ನೇಮಕಾತಿಗಾಗಿ ಕಾದು ಕಾದು ಹಲವರ ವಯಸ್ಸಿನ ಮಿತಿ ಕಳೆದಿದೆ. ಅವರು ಏನು ಮಾಡಬೇಕು. ಸರ್ಕಾರದ ತಪ್ಪಿಗೆ ಅಭ್ಯರ್ಥಿಗಳಿಗೆ ಶಿಕ್ಷೆಯಾಗುತ್ತಿದೆ. ಯಾವೊಂದು ಇಲಾಖೆಯ ನೇಮಕಾತಿಯನ್ನೂ ಸರ್ಕಾರ ಮಾಡುತ್ತಿಲ್ಲ. ಉದ್ಯೋಗಾಕ್ಕಾಗಿ ಅಲೆದು ಅಲೆದು ಯುವಕರು ರೋಸಿಹೋಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಚಿತ ಅಕ್ಕಿಯ ಅನ್ನತಿಂದು, ಬಸ್ ನಲ್ಲಿ ಓಡಾಡಿಕೊಂಡೇ ಅವರು ಇರಬೇಕಾ? ಕೆಲಸಕ್ಕಾಗಿ ಹೀಗೆ ಅಡ್ಡಾಡುತ್ತಾ ಇದ್ರೆ ಸಾಕಾ? ಈ ರೀತಿ ಆದರೆ ನಾಳೆ ರಾಜ್ಯದಲ್ಲಿಯೂ ಮಂತ್ರಿಗಳ ಮೇಲೆ ದಾಳಿ ನಡೆಸುವ ಸ್ಥಿತಿ ಬರುತ್ತದೆ. ನೇಪಾಳದಲ್ಲಿ ಆದಂತೆ ರಾಜ್ಯದಲ್ಲಿಯೂ ಯುವಕರು ದಾಳಿ ಮಾಡುವ ದಿನ ದೂರವಿಲ್ಲ. ನೇಪಾಳದಲ್ಲಿ ಯಾರೂ ಹಿರಿಯರು, ವಯಸ್ಸಾದವರು ಸರ್ಕಾರದ ವಿರುದ್ಧ ದಾಳಿ ಮಾಡಿಲ್ಲ. ಅಲ್ಲಿನ ಭ್ರಷ್ಟಾಚಾರ, ನಿರುದ್ಯೋಗ, ಆರ್ಥಿಕ ಸಂಕಷ್ಟಕ್ಕೆ ನೊಂದು ಯುವ ಜನತೆ ರೊಚ್ಚಿಗೆದ್ದು ದಾಳಿ ನಡೆಸಿದ್ದರು. ಇದೇ ರೀತಿ ಆಗುವ ಮೊದಲು ಸರ್ಕಾರ ಎಚ್ಚರ ವಹಿಸಲಿ ಎಂದರು.