ಯಾದಗಿರಿ: ಕಳ್ಳಬಟ್ಟಿ ತಯಾರಿ ನಡೆಸುತ್ತಿದ್ದ ಘಟಕದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಆಬಕಾರಿ ಪೊಲೀಸ್ ಹಾಗೂ ಗೃಹರಕ್ಷಕ ಸಿಬ್ಬಂದಿಯನ್ನು ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಪಸಪುಲ್ ತಾಂಡಾದ ಶಂಕ್ರಿಬಾಯಿ, ನಿಂಗಪ್ಪ, ಮೋಹನ, ಸೋಮ್ಲಾ, ಶಾಂತಿಬಾಯಿ ಮತ್ತು ಬೀಚಿಬಾಯಿ ವಿರುದ್ಧ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಯಾದಗಿರಿ ಅಬಕಾರಿ ಇನ್ಸ್ ಪೆಕ್ಟರ್ ಕಚೇರಿಯ ಅಬಕಾರಿ ಪೊಲೀಸ್ ಪರಶುರಾಮ ರಾಠೋಡ್ ಹಾಗೂ ಗೃಹರಕ್ಷಕ ಭೀಮರಾಯ ಕಬ್ಬೇರ ನಿನ್ನೆ ಗಸ್ತು ನಡೆಸುತ್ತಿದ್ದ ವೇಳೆ ಪಸಪುಲ್ ತಾಂಡಾದ ಶಂಕ್ರಿಬಾಯಿ ನಿಂಗಪ್ಪ ಮನೆಯಲ್ಲಿ ಕಳ್ಳಬಟ್ಟಿ ಸಾರಾಯಿ ತಾಯಾರಿಸುವ ಕುರಿತು ಅಬಕಾರಿ ಇನ್ಸ್ ಪೆಕ್ಟರ್ ಗೆ ಮಾಹಿತಿ ಬಂದಿತ್ತು. ಗಸ್ತಿನಲ್ಲಿದ್ದ ಪೊಲೀಸರಿಗೆ ಪರಿಶೀಲಿಸಲು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಪರಿಶೀಲನೆಗೆ ತೆರಳಿದ್ದ ವೇಳೆ ಶಂಕ್ರಿಬಾಯಿ ಅವಾಚ್ಯವಾಗಿ ನಿಂದಿಸಿದ್ದಲ್ಲದೇ ಇನ್ನಷ್ಟು ಜನರನ್ನು ಕರೆದು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.