ಬೆಂಗಳೂರು : ರಾಜ್ಯದಲ್ಲಿ ‘ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧ ತಡೆಗೆ ಪ್ರತ್ಯೇಕ ಕಾಯಿದೆ ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಇಂದು ವಿಧಾನಸೌಧದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ದ್ವೇಷ ಅಪರಾಧಗಳು ಮತ್ತು ದ್ವೇಷ (ಹೋರಾಟ, ತಡೆಯುವಿಕೆ) ವಿಧೇಯಕ 2025 ಕ್ಕೆ ಅನುಮೋದನೆ ಪಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಕಳೆದ ಜೂನ್ ತಿಂಗಳಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಪ್ರಾಥಮಿಕವಾಗಿ ಕರಡು ವಿಧೇಯಕ ಪ್ರಸ್ತಾಪಿಸಲಾಗಿತ್ತು, ಅಂತಿಮ ವಿಧೇಯಕ ಇಂದು ಮಂಡನೆಯಾಗಲಿದೆ. ಇಂದು ಅನುಮೋದನೆ ನೀಡಿದ ಬಳಿಕ ಬೆಳಗಾವಿ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ .
ರಾಜ್ಯದಲ್ಲಿ ಒಂದು ಸಮುದಾಯ, ಜಾತಿ, ಧರ್ಮ ನಿರ್ಧಿಷ್ಟ ಸಮುದಾಯದ ವ್ಯಕ್ತಿಗಳು, ಧಾರ್ಮಿಕ ಮುಖಂಡರು ಸೇರಿದಂತೆ ಮತ್ತಿತರರನ್ನು ಗುರಿಯಾಗಿಟ್ಟುಕೊಂಡು ಕೆಲವು ನಿರ್ಧಿಷ್ಟ ಬಣದವರು ಹಲ್ಲೆ ಮಾಡುವುದು ಜನಾಂಗೀಯ ನಿಂದನೆ, ದ್ವೇಷ ಭಾಷಣ ಮಾಡುವುದು ಸರ್ವೆ ಸಾಮಾನ್ಯವಾಗಿತ್ತು. ಇದನ್ನು ತಡೆಗಟ್ಟಬೇಕೆಂಬ ಬೇಡಿಕೆ ಕೇಳಿಬಂದಿತ್ತು.
ಆದ್ದರಿಂದ ದ್ವೇಷ ಭಾಷಣದ ವಿರುದ್ಧ ಕಾಯಿದೆ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ, ಯಾವುದೇ ಭಾಷೆ, ಧರ್ಮ, ಜಾತಿ, ಊರು, ನ್ಯೂನತೆ ಆಧರಿಸಿ ದ್ವೇಷ ಭಾಷಣ ಮಾಡುವುದನ್ನು ನಿರ್ಬಂಧಿಸಲಾಗುತ್ತದೆ. ಧರ್ಮವನ್ನು ಆಧಾರವಾಗಿ ಇಟ್ಟುಕೊಂಡು ಟೀಕೆ ಮಾಡುವವರಿಗೆ ಈ ಕಾಯಿದೆ ಎಚ್ಚರಿಕೆ ನೀಡುತ್ತದೆ. ಈ ಕಾಯಿದೆ ಮೂಲಕ ದ್ವೇಷದ ಭಾಷಣ ಮಾಡುವರಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯಿರುತ್ತದೆ.
