ವಿಜಯಪುರ: ಸಾಲದ ಹಣಕ್ಕಾಗಿ ಸಾಲ ನೀಡಿದವನು ವ್ಯಕ್ತಿಯನ್ನೇ ಒತ್ತೆಯಾಗಿ ಇಟ್ಟುಕೊಂಡಿರುವ ಅಮಾನವೀಯ ಘಟನೆ ವಿಜಯಪುರದಲ್ಲಿ ನಡೆದಿದೆ.
ಸಾಲ ಪಡೆದ ಹಣ ನೀಡದ ಕಾರಣಕ್ಕೆ ಕಳೆದ 27 ದಿನಗಳಿಂದ ಸಾಲದಾತ, ವ್ಯಕ್ತಿಯನ್ನು ಒತ್ತೆ ಇಟ್ಟುಕೊಂಡಿದ್ದಾನೆ. ದೇವರ ಹಿಪ್ಪರಗಿ ತಾಲೂಕಿನ ಪಡಗಾನೂರು ಗ್ರಾಮದ ಉದಯಕುಮಾರ್ ಬಾವಿಮನಿ ಎಂಬುವವರನ್ನು ಬಸವನಬಾಗೇವಾಡಿ ಪಟ್ಟಣದ ಪ್ರಭಾಕರ ಢವಳಗಿ ಎಂಬುವವರು ಒತ್ತೆಯಾಗಿ ಇಟ್ಟುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಉದಯಕುಮಾರ್ ಬೆಂಗಳೂರಿನಲ್ಲಿ ಖಾಸಗಿ ಶಾಲೆಯ ಶಿಕ್ಷಕರಾಗಿದ್ದರು. ಪ್ರಭಾಕರ ಢವಳಗಿ ಕೂಡ ಶಿಕ್ಷಕರಾಗಿದ್ದರು. ಈಗ ನಿವೃತ್ತಿಯಾಗಿದ್ದಾರೆ. ಉದಯಕುಮಾರ್ 31.50 ಲಕ್ಷ ರೂಪಾಯಿ ಸಾಲದ ಹಣವನ್ನು ನೀಡಬೇಕು ಎಂದು ಪ್ರಭಾಕರ ಹೇಳುತ್ತಿದ್ದಾರೆ. ಉದಯಕುಮಾರ್ ಗೋವಾಕ್ಕೆ ಹೋಗಿದ್ದ ವೇಳೆ ಅಲ್ಲಿಂದಲೇ ಪ್ರಭಾಕರ ಅವರನ್ನು ಕರೆದುಕೊಂಡು ಹೋಗಿದ್ದು, ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ. ನಿಜವಾಗಿಯೂ ಉದಯಕುಮಾರ್, ಪ್ರಭಾಕರ್ ಬಳಿ ಎಷ್ಟು ಸಾಲ ಪಡೆದಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಕುಟುಂಬದಬರು ಕಂಗಾಲಾಗಿದ್ದಾರೆ.
ಉದಯಕುಮಾರ್ ಕುಟುಂಬದವರು ಬಡತನದಲ್ಲಿ ಬಂದಿದ್ದು, ನಾಲ್ವರು ಸಹೋದರರು. ವೃದ್ಧ ತಾಯಿ. ಓರ್ವ ಸಹೋದರ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಮರಳು ಅನ್ ಲೋಡ್ ಕೆಲಸ ಮಾಡುತ್ತಾರೆ ಮತ್ತೋರ್ವ ಸಹೋದರ ರತ್ನಗಿರಿಯಲ್ಲಿ ಡ್ರೈವರ್. ಇನ್ನೋರ್ವ ಸಹೋದರ ಪಡಗಾನೂರು ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಾರೆ. ಉದಯಕುಮಾರ್ ಬೆಂಗಳೂರಿನಲ್ಲಿ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಉದಯಕುಮಾರ್ ಪ್ರಭಾಕರ್ ಅವರಿಂದ ಸಾಲ ಪಡೆದಿದ್ದಾರೆ ಎನ್ನಲಾಗಿದೆ. ಇದೀಗ ಉದಯಕುಮಾರ್ ನನ್ನು ಒತ್ತೆಯಾಳಾಗಿ ಇಟ್ಟುಕೊಂಡಿರುವ ಪ್ರಭಾಕರ್, ಆತ ಸಾಲ ತೀರಿಸದಿದ್ದರೆ ಬಿಟ್ಟು ಕಳುಹಿಸುವುದಿಲ್ಲ ಎಂದು ಕುಟುಂಬದವರಿಗೆ ಹೇಳಿ ಕಳುಹಿಸಿದ್ದಾನಂತೆ. ಸದ್ಯ ಪ್ರಕರಣ ಎಸ್ ಪಿ ಲಕ್ಷ್ಮಣ ನಿಂಬಾಳಕರ್ ಗಮನಕ್ಕೆ ಬಂದಿದ್ದು, ಕುಟುಂಬದವರು ದೂರು ನೀಡಲಿ. ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.