ಲಖನೌ: ಮೋಸ್ಟ್ ವಾಂಟೆಡ್ ಹೆದ್ದಾರಿ ದರೋಡೆಕೋರ ಪೊಲೀಸ್ ಎನ್ ಕೌಂಟರ್ ಗೆ ಬಲಿಯಾಗಿರುವ ಘಟನೆ ಉತ್ತರ ಪ್ರದೇಶದ ಬಾಗ್ ಪತ್ ನಲ್ಲಿ ನಡೆದಿದೆ.
ಹರಿಯಾಣ ರೋಹ್ಟಕ್ ನಿವಾಸಿ ಸಂದೀಪ್ ಎನ್ ಕೌಂಟರ್ ಗೆ ಬಲಿಯಾಗಿರುವ ದರೋಡೆಕೋರ. ಹೆದ್ದಾರಿಗಳಲ್ಲಿ ಸರಕುಗಳನ್ನು ತುಂಬಿದ್ದ ಟ್ರಕ್ ಗಳನ್ನು ತಡೆದು ಚಾಲಕರನ್ನು ಹತ್ಯೆಗೈದು ಲೂಟಿ ಮಾಡುತ್ತಿದ್ದ. ಸಂದೀಪ್ ಹಾಗೂ ಗ್ಯಾಂಗ್ ಮೇಲೆ ನೊಯ್ಡಾದ ಎಸ್ ಟಿಎಫ್ ಘಟಕ ಹಾಗೂ ಬಾಗ್ ಪತ್ ಪೊಲೀಸರು ಎನ್ ಕೌಂಟರ್ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಗುಂಡೇಟು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಸಂದೀಪ್ ನನ್ನು ಆಸ್ಪತ್ರೆಗೆ ದಾಖಲಿಸುವ ವೇಳೆ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾನೆ.
ಕಾನ್ಪುರದಿಂದ ಸುಮಾರು 4 ಕೋಟಿ ಮೌಲ್ಯದ ನಿಕ್ಕಲ್ ಪ್ಲೇಟ್ ಗಳನ್ನು ಸಾಗಿಸುತ್ತಿದ್ದ ಟ್ರಕ್ ನ್ನು ಲೂಟಿ ಮಾಡಿದ್ದ ಪ್ರಕರಣದಲ್ಲಿ ಸಂದೀಪ್ ಪ್ರಮುಖ ಆರೋಪಿಯಾಗಿದ್ದ. ಈತನ ಬಗ್ಗೆ ಸುಳಿವು ನೀಡಿದವರಿಗೆ 1 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಇದೀಗ ಎನ್ ಕೌಂಟರ್ ಗೆ ಬಲಿಯಾಗಿದ್ದಾನೆ.