ನಾಡಿನ ಪ್ರತಿಯೊಬ್ಬ ಮಹಿಳೆಯೂ ಕೂಡ ಆರ್ಥಿಕ ಸಂಕಷ್ಟಗಳಿಂದ ಹೊರಬಂದು ಸುಖ ಸಂತೋಷದಿಂದ ಜೀವನ ಸಾಗಿಸುವಂತಾಗಬೇಕು ಎಂಬ ರಾಜ್ಯ ಸರ್ಕಾರದ ಉದ್ದೇಶವನ್ನು ಗೃಹಲಕ್ಷ್ಮಿ ಯೋಜನೆಯು ಈಡೇರಿಸುತ್ತಿದೆ. ಮತ್ತೊಂದೆಡೆ ಅನೇಕ ಗೃಹಿಣಿಯರು ತಮಗೆ ಬಂದ ಗೃಹಲಕ್ಷ್ಮಿ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುತ್ತಿರುವುದು ಗಮನಾರ್ಹ ಸಂಗತಿ.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಿಂದ ಕೊಟುಮಚಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 4 ಕಿ.ಮೀ. ಉದ್ದದ ರಸ್ತೆ ಬದಿ ಬೆಳೆದು ನಿಂತಿದ್ದ ಮುಳ್ಳು ಕಂಟಿಯನ್ನು ರೈತ ಮಹಿಳೆ ಸವಿತಾ ಉಮೇಶ ನಾಗರೆಡ್ಡಿ ಅವರು ಗೃಹಲಕ್ಷ್ಮಿ ಹಣದಿಂದ ಸ್ವಚ್ಛಗೊಳಿಸಿದ್ದಾರೆ.
‘ಹೊಲಗಳಿಗೆ ಹೋಗುವ ರಸ್ತೆ ಬಹಳ ಕಿರಿದಾಗಿತ್ತು. ಇದರಿಂದ ರೈತರಿಗೆ ಬಹಳ ತೊಂದರೆಯಾಗುತ್ತಿತ್ತು. ಹೀಗಾಗಿ ‘ಗೃಹಲಕ್ಷ್ಮಿ’ ಯೋಜನೆಯ 22 ಸಾವಿರ ರೂ. ಹಣದಿಂದ ಜೆಸಿಬಿ ಬಳಸಿ ಮುಳ್ಳು ಜಾಲಿಯನ್ನು ಸ್ವಚ್ಛಗೊಳಿಸಿದ್ದೇನೆ ಎಂದು ಸವಿತಾ ಹೇಳಿದ್ದಾರೆ.