RSS ಕಾರ್ಯಾಲಯ ‘ಕೇಶವ ಕೃಪಾ’ ಮೇಲೆ ಅನಿರೀಕ್ಷಿತ ದಾಳಿ ಯತ್ನ: ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿಗೆ ಸರ್ಕಾರವೇ ಹೊಣೆ: ವಿಜಯೇಂದ್ರ ಆಕ್ರೋಶ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ರಾಷ್ಟ್ರಭಕ್ತ ಮನಸ್ಸುಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಗೂಂಡಾಗಿರಿ ನಡೆಸುವ ಕಾರ್ಯಕ್ಕೆ ಕಾಂಗ್ರೆಸ್ ಚಾಲನೆ ನೀಡಿದ್ದು, ಅದರ ವರಿಷ್ಠರ ಚಿತಾವಣೆಯಿಂದ ಉದ್ರಿಕ್ತಗೊಂಡ ಯುವ ಕಾಂಗ್ರೆಸ್, ಎನ್.ಎಸ್.ಯು.ಐ. ಸಂಘದ ಕಾರ್ಯಾಲಯ ಕೇಶವ ಕೃಪಾಗೆ ಅನಿರೀಕ್ಷಿತ ದಾಳಿ ನಡೆಸಲು ಯತ್ನಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ದಿನದ ಘಟನೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ, ಶಾಂತಿ, ಸುವ್ಯವಸ್ಥೆ ನಮ್ಮ ಆದ್ಯತೆ, ದ್ವೇಷ, ಮತ್ಸರ, ವಿಧ್ವಂಸಕ ಕೃತ್ಯ ಉತ್ತೇಜಿಸುವುದು ನಿಮ್ಮ ಅಜೆಂಡಾ ಆಗಿದ್ದರೆ, ಅದನ್ನು ಎದುರಿಸುವ ಶಕ್ತಿ ಹಾಗೂ ತಾಕತ್ತು ಭಾರತೀಯ ಜನತಾ ಪಾರ್ಟಿಯ ಪ್ರತಿ ಕಾರ್ಯಕರ್ತನಿಗೂ ಇದೆ. ಈ ಕುರಿತು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ರಾಜ್ಯದಲ್ಲಿ ಪರಿಸ್ಥಿತಿಗೆ ಕಾಂಗ್ರೆಸ್ ಸರ್ಕಾರವೇ ಹೊಣೆಯಾಗುತ್ತದೆ ಎಂದಿದ್ದಾರೆ.

ಸರ್ಕಾರದ ಹಿರಿಯ ಅಧಿಕಾರಿಗಳು ಸಚಿವ ಪ್ರಿಯಾಂಕ್ ಖರ್ಗೆ ಅವರ ಬೆದರಿಕೆಗೆ ಹೆದರಿ ದ್ವೇಷದ ರಾಜಕಾರಣಕ್ಕೆ ಹೆಗಲು ಕೊಡಲು ಆರಂಭಿಸಿದ್ದಾರೆ. ಇದರ ಆರಂಭವೆಂಬಂತೆ ರಾಯಚೂರು ಜಿಲ್ಲೆಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಪಕ್ಷದ ಶಾಸಕರಾದ ಮಾನಪ್ಪ ಡಿ. ವಜ್ಜಲ್ ಅವರ ಆಪ್ತ ಸಹಾಯಕ ಪ್ರವೀಣ್ ಕುಮಾರ್ ಕೆ.ಪಿ. ಅವರನ್ನು ಆರ್.ಎಸ್.ಎಸ್.  ಶತಮಾನೋತ್ಸವ ಪಥಸಂಚನದಲ್ಲಿ ಭಾಗವಹಿಸಿದ್ದ ಕಾರಣಕ್ಕಾಗಿ ಅಮಾನತುಗೊಳಿಸುವ ಮೂಲಕ ದೇಶಭಕ್ತಿ ಮನಸ್ಥಿತಿಗಳ ಮೇಲೆ ಸರ್ಕಾರಿ ಯಂತ್ರ ಬಳಸಿಕೊಂಡು ದಾಳಿ ಆರಂಭಿಸಿದ್ದಾರೆ ಎಂದು ಟೀಕಿಸಿದ್ದಾರೆ

ಇದು ಕಾಂಗ್ರೆಸ್ ಪಕ್ಷದ ವಿಕೃತಿ ಹಾಗೂ ಹಿಂದೂ ವಿರೋಧಿ ಮನಸ್ಥಿತಿಯ ಮತ್ಸರದ ಕ್ರಮವಲ್ಲದೆ ಬೇರೇನೂ ಅಲ್ಲ. ಸರ್ಕಾರಿ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳಲು ಆರಂಭಿಸಿದ್ದೀರಿ, ಅದನ್ನು ಹೇಗೆ ಸರಿದಾರಿಗೆ ತರಬೇಕೆನ್ನುವ ತಂತ್ರ ನಮಗೂ ತಿಳಿದಿದೆ. ತಕ್ಷಣ ಈ ಸೇಡಿನ ಅಮಾನತು ಹಿಂಪಡೆದು ಕ್ಷಮೆ ಯಾಚಿಸಬೇಕು, ಇಲ್ಲದಿದ್ದರೆ ದ್ವೇಷದ ರಾಜಕಾರಣಕ್ಕೆ ಸಂವಿಧಾನಿಕ ಮಾರ್ಗದಲ್ಲಿ ಜನತಂತ್ರ ವ್ಯವಸ್ಥೆಯಲ್ಲಿ ತಕ್ಕ ಉತ್ತರ ನೀಡಬೇಕಾದೀತು ಎಂದು ಎಚ್ಚರಿಸಿದ್ದಾರೆ.

ದ್ವೇಷದ ರಾಜಕಾರಣ ನಡೆಸಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಪ್ರಜಾತಂತ್ರ ವ್ಯವಸ್ಥೆಯ ಕತ್ತು ಹಿಸುಕಿದ ಕುಖ್ಯಾತಿಯ ಹಿನ್ನಲೆಯ ಕಾಂಗ್ರೆಸ್ ಇದೀಗ ಕರ್ನಾಟಕದಲ್ಲಿ ಅದೇ ಮಾರ್ಗದಲ್ಲಿ ಮುಂದುವರೆದಿದೆ. ದ್ವೇಷ ಬಿತ್ತುವ ರಾಜಕಾರಣ ಹಾಗೂ ಸರ್ವಾಧಿಕಾರಿ ಧೋರಣೆಯಿಂದ ಅಟ್ಟಹಾಸ ಮೆರೆದರೆ ಈ ದೇಶದ ಜನ ಅವರನ್ನು ನಾಮಾವಶೇಷಗೊಳಿಸುತ್ತಾರೆ ಎಂಬುದಕ್ಕೆ ಇತಿಹಾಸದ ಪುಟಗಳಲ್ಲಿ ದಾಖಲೆಗಳಿವೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read