ವಿಜಯಪುರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅಟೆಂಡರ್ ಹುದ್ದೆಗೆ ನಕಲಿ ಅಂಕಪಟ್ಟಿ ಸಲ್ಲಿಸಿದ ಪ್ರಕರಣದಲ್ಲಿ ಇಬ್ಬರು ಅಪರಾಧಿಗಳಿಗೆ ಎರಡೂವರೆ ವರ್ಷ ಜೈಲು ಶಿಕ್ಷೆ, ತಲಾ ನಾಲ್ಕು ಸಾವಿರ ರೂಪಾಯಿ ದಂಡ ವಿಧಿಸಿ ವಿಜಯಪುರದ ಪ್ರಧಾನ ಸಿಜೆಎಂ ನ್ಯಾಯಾಲಯ ಆದೇಶಿಸಿದೆ.
ಶ್ರೀಶೈಲ ಚವಾಣ್ ಮತ್ತು ಗಂಗಪ್ಪ ನಾಯಕ ಎಂಬುವರು ಶಿಕ್ಷೆಗೆ ಒಳಗಾದವರು. 2013ರಲ್ಲಿ ಇಬ್ಬರೂ ತಮ್ಮ 7ನೇ ತರಗತಿಯ ನಕಲಿ ಅಂಕಪಟ್ಟಿಗಳನ್ನು ತಯಾರಿಸಿ ಅದನ್ನೇ ನಿಜವೆಂದು ಕೆಎಸ್ಆರ್ಟಿಸಿ ಅಟೆಂಡರ್ ಹುದ್ದೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ದಾಖಲಾತಿ ಪರಿಶೀಲಿಸಿದಾಗ ಮಹದೇವ ಕಾಂಬಳೆ ಎಂಬುವರು ಅಂಕಪಟ್ಟಿಗಳು ಸರಿಯಾಗಿವೆ ಎಂದು ದೃಢೀಕರಿಸಿ ಪ್ರಮಾಣ ಪತ್ರ ನೀಡಿದ್ದರು. ಇಬ್ಬರೂ ಆರೋಪಿಗಳು ಮೂಲ ಅಂಕಪಟ್ಟಿಗಳು ಕಳೆದು ಹೋಗಿವೆ ಎಂದು ಸಾಕ್ಷ್ಯ ನಾಶಪಡಿಸಿದ್ದರು. ಈ ಬಗ್ಗೆ ಸಂಸ್ಥೆಯ ವಿಭಾಗೀಯ ಕಚೇರಿಯ ಭದ್ರತಾ ಮತ್ತು ಜಾಗೃತ ಅಧಿಕಾರಿ ದುರ್ಗಪ್ಪ ಗುರಿಗಾರ 2013ರ ಡಿಸೆಂಬರ್ 26ರಂದು ಗೋಲಗುಮ್ಮಟ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರು ತನಿಖೆ ನಡೆಸಿ ಕೋರ್ಟ್ ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಅಂಬಲಿ ಇಬ್ಬರಿಗೂ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಅಭಿಯೋಜಕ ಎಲ್.ಎಂ. ಹಳ್ಳೂರ ವಾದ ಮಂಡಿಸಿದ್ದರು.