ಹಾವೇರಿ: ಬಾಲಕಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಎಫ್.ಎಸ್.ಎಲ್. ವರದಿಯನ್ನು ಖಾಸಗಿ ಆಸ್ಪತ್ರೆಯ ಪರವಾಗಿ ನೀಡಲು ಲಂಚ ಸ್ವೀಕರಿಸುತ್ತಿದ್ದ ವೈದ್ಯ ಸೇರಿದಂತೆ ಇಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಬಾಲಕಿ ಮೃತಪಟ್ಟಿದ್ದು, ಎಫ್.ಎಸ್.ಎಲ್. ವರದಿಯನ್ನು ಪರವಾಗಿ ನೀಡಲು ಲಂಚ ಸ್ವೀಕರಿಸುತ್ತಿದ್ದ ನ್ಯಾಯ ವೈದ್ಯಶಾಸ್ತ್ರದ ಡಾ. ಗುರುರಾಜ ಬಿರದಾರ ಮತ್ತು ಖಾಸಗಿ ವ್ಯಕ್ತಿ ಶಂಕ್ರಯ್ಯ ಕುಲಕರ್ಣಿ ಬಲೆಗೆ ಬಿದ್ದಿದ್ದಾರೆ.
ಇವರು ಆಸ್ಪತ್ರೆಯ ಪರವಾಗಿ ಎಫ್.ಎಸ್.ಎಲ್. ವರದಿ ನೀಡಲು ವೈದ್ಯ ಮತ್ತು ಖಾಸಗಿ ವ್ಯಕ್ತಿ 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಖಾಸಗಿ ಆಸ್ಪತ್ರೆ ಮುಖ್ಯಸ್ಥ ಮಲ್ಲೇಶಪ್ಪ ಮಾಸಣಗಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. 3 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಡಿವೈಎಸ್ಪಿ ಮಧುಸೂದನ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.