ತುಮಕೂರು: ಹೇಮಾವತಿ ಲಿಂಕ್ ಕೆನಲ್ ಕಾಮಗಾರಿಗೆ ವಿರೋಧಿಸಿ ತುಮಕೂರಿನ ಗುಬ್ಬಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಉಗ್ರಸ್ವರೂಪ ಪಡೆದಿದೆ.
ಹೇಮಾವತಿ ಲಿಂಕ್ ಕೆನಲ್ ಯೋಜನೆ ಮೂಲಕ ರಾಮನಗರಕ್ಕೆ ಹೇಮಾವತಿ ನೀರು ಹರಿಸುವ ಯೋಜನೆ ಇದಾಗಿದ್ದು, ಕಾಮಗಾರಿ ನಿಲ್ಲಿಸುವಂತೆ ರೈತರು, ತುಮಕೂರು ಜಿಲ್ಲೆಯ ಜನರು ಆಗ್ರಹಿಸಿದ್ದಾರೆ. ಹೇಮಾವತಿ ಕೆನಲ್ ಯೋಜನೆ ನಿಲ್ಲಿಸುವಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಜನಪ್ರತಿನಿಧಿಗಳು, ಸ್ವಾಮೀಜಿಗಳು ಬೆಂಬಲ ನೀಡಿದ್ದು, ಗುಬ್ಬಿಯಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ.
ರಾಷ್ಟ್ರೀಯ ಹೆದ್ದಾರಿ ತಡೆದು, ಟೈರ್ ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಶಾಸಕ ಸುರೇಶ್ ಗೌಡ, ಯಾವುದೇ ಕಾರಣಕ್ಕೂ ಹೇಮಾವತಿ ನೀರು ಹರಿದು ಹೋಗಲು ಬಿಡಲ್ಲ ಎಂದು ಎಚ್ಚರಿಸಿದ್ದಾರೆ.
ಹೇಮಾವತಿ ಲಿಂಕ್ ಕೆನಲ್ ಯೋಜನೆಯಿಂದ ಜಿಲ್ಲೆಯ ಜನರಿಗೆ ಹಾಗೂ ಇಲ್ಲಿನ ರೈತರಿಗೆ ಅನ್ಯಾಯವಾಗಲಿದೆ. ತುಮಕೂರಿನ ಅನೇಕ ಹಳ್ಳಿಯಗಳಲ್ಲಿ ನೀರಿನ ಸಮಸ್ಯೆಯಿರುವಾಗ ಇಂತಹ ಅವೈಜ್ಞಾನಿಕ ಯೋಜನೆ ಜಾರಿ ಮಾಡುವುದು ಸರಿಯಲ್ಲ. ಹೇಮಾವತಿ ಕೆನಲ್ ಮೂಲಕ ನೀರು ಹರಿಸುವುದು ಸಂಪೂರ್ಣ ಅವೈಜ್ಞಾಕ ಇದರಿಂದ ಈ ಭಾಗದ ರೈತರಿಗೆ ಅನ್ಯಾಯಾಗುತ್ತದೆ. ಯಾವುದೇ ಕಾರಣಕ್ಕೂ ನೀರು ಹರಿಸಲು ಬಿಡಲ್ಲ. ಒಂದು ವೇಳೆ ನೀರು ಹರಿಸುವುದಾದರೆ ನನ್ನ ಹೆಣದ ಮೇಲೆ ನೀರು ಹರಿಸಿ ಎಂದು ಸುರೇಶ್ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.