ಎಷ್ಟೇ ಕಷ್ಟ ಬಂದರೂ ಸ್ನೇಹಿತರಿಗಾಗಿ ನಿಲ್ಲುವವರೇ ನಿಜವಾದ ಗೆಳೆಯರು. ಇದಕ್ಕೆ ತಾಜಾ ನಿದರ್ಶನವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕಂಡುಬಂದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ನೇಹಿತನೊಬ್ಬ, ತನ್ನ ಜೀವದ ಗೆಳೆಯನ ಮದುವೆಗೆ ಗಾಯಗೊಂಡ ಸ್ಥಿತಿಯಲ್ಲೇ ಹಾಜರಾಗಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾನೆ.
ವಿಡಿಯೋದಲ್ಲಿ ಏನಿದೆ ?
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋ, ಗೆಳೆತನದ ಮಹತ್ವವನ್ನು ಸಾರುತ್ತಿದೆ. ವೀಡಿಯೊದಲ್ಲಿ, ಕೈಗಳಿಗೆ ಪ್ಲಾಸ್ಟರ್, ಬಾಯಿಗೆ ಬ್ಯಾಂಡೇಜ್ ಹಾಕಿಕೊಂಡಿರುವ ವ್ಯಕ್ತಿಯೊಬ್ಬನನ್ನು ನಾಲ್ಕೈದು ಜನ ಸೇರಿ ಮದುವೆ ವೇದಿಕೆಯತ್ತ ಕರೆತರುತ್ತಿರುವುದು ಕಾಣುತ್ತದೆ. ಆತನ ಕೈಯಲ್ಲಿ ಮೂತ್ರದ ಚೀಲವಿದ್ದು, ಸರಿಯಾಗಿ ನಡೆಯಲು ಸಾಧ್ಯವಾಗದೆ ಇನ್ನೊಬ್ಬ ಸ್ನೇಹಿತನ ಭುಜದ ಮೇಲೆ ಕೈ ಹಾಕಿ ಸಾಗುತ್ತಿದ್ದಾನೆ. ಇಷ್ಟೆಲ್ಲಾ ನೋವಿನಲ್ಲೂ ಆತನ ಮುಖದಲ್ಲಿ ನಗು ಮಾಸಿಲ್ಲ. ಈ ವಿಡಿಯೋದೊಂದಿಗೆ “ದೋಸ್ತ್ ಕಿ ಶಾದಿ ಮೇ ಮಸ್ತಿ” (ಸ್ನೇಹಿತನ ಮದುವೆಯಲ್ಲಿ ಮಸ್ತಿ) ಎಂಬ ಶೀರ್ಷಿಕೆ ನೀಡಲಾಗಿದೆ.
ವರ-ವಧು ಅಚ್ಚರಿ
ವೇದಿಕೆಗೆ ಗಾಯಾಳು ಸ್ನೇಹಿತನನ್ನು ಕರೆತಂದಾಗ, ವರ “ಏನಾಯ್ತು ಗುರು?” ಎಂದು ಆಶ್ಚರ್ಯದಿಂದ ಕೇಳುತ್ತಾನೆ. ವಧುವೂ ಸಹ ಈ ದೃಶ್ಯವನ್ನು ಗಂಭೀರವಾಗಿ ನೋಡುತ್ತಾಳೆ. ಯಾವುದೇ ಪರಿಸ್ಥಿತಿಯಿರಲಿ, ಸ್ನೇಹಿತನ ಸಂತೋಷದಲ್ಲಿ ಪಾಲ್ಗೊಳ್ಳಲೇಬೇಕು ಎಂಬ ಸಂದೇಶವನ್ನು ಈ ವಿಡಿಯೋ ಸ್ಪಷ್ಟವಾಗಿ ಸಾರುತ್ತದೆ. ಆತನ ಮುಖದಲ್ಲಿರುವ ನಗು, ಗೆಳೆಯನ ಮದುವೆಗೆ ಬಂದ ಸಂತೋಷವನ್ನು ಎತ್ತಿ ತೋರಿಸುತ್ತದೆ.
ನೆಟ್ಟಿಗರಿಂದ ಮೆಚ್ಚುಗೆ
ಸದ್ಯ ಈ ವಿಡಿಯೋ 49,000ಕ್ಕೂ ಹೆಚ್ಚು ಲೈಕ್ಗಳನ್ನು ಪಡೆದಿದ್ದು, ನೂರಾರು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. “ನನಗೆ ನಗುವುದನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ,” ಎಂದು ಒಬ್ಬ ಬಳಕೆದಾರರು ಬರೆದರೆ, “ಈ ಸ್ಥಿತಿಯಲ್ಲೂ ಇವನು ಡ್ಯಾನ್ಸ್ ಮಾಡುತ್ತಾನೆ ಎಂದು ಅಂದುಕೊಂಡೆ,” ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. “ಗುರು, ಈ ಗಾಯಗಳೆಲ್ಲಾ ನಿಜ ಅಲ್ವಾ?” ಎಂದು ಮತ್ತೊಬ್ಬ ಬಳಕೆದಾರ ತಮಾಷೆ ಮಾಡಿದ್ದಾರೆ.
ಈ ಘಟನೆ, ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಗೆಳೆಯರಿಗಾಗಿ ನಿಲ್ಲುವ ಮನಸ್ಸುಳ್ಳವರ ಬಗ್ಗೆ ಮಾತನಾಡುವಂತೆ ಮಾಡಿದೆ.