ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಶಿವಪುರ ರೈಲ್ವೆ ಲೆವೆಲ್ ಕ್ರಾಸಿಂಗ್ ನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಟಿಪ್ಪರ್ ಹೊತ್ತಿ ಉರಿದಿದ್ದು, ಬಿಹಾರ ಮೂಲದ ಚಾಲಕ ಬೆಂಕಿ ತಗುಲಿ ಸಾವನ್ನಪ್ಪಿದ್ದಾರೆ. ರೈಲ್ವೆ ಹಳಿಯ ಮೇಲೆ ಟಿಪ್ಪರ್ ನಿಂತ ಕಾರಣ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ನಿಂತಿದ್ದ ರೈಲಿನಲ್ಲಿ ವೃದ್ಧರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಶಿವಪುರ ರೈಲ್ವೆ ಕ್ರಾಸಿಂಗ್ ಸಮೀಪ ಹಳ್ಳಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಭಾನುವಾರ ಸಂಜೆ 4:30ರ ವೇಳೆಗೆ ಮಣ್ಣು ಸುರಿಯಲು ಟಿಪ್ಪರ್ ಆಗಮಿಸಿದೆ. ರೈಲು ಹಳಿಗಳ ಮೇಲ್ಭಾಗ ಅಳವಡಿಸಿರುವ ವಿದ್ಯುತ್ ಲೈನ್ ಗೆ ಟಿಪ್ಪರ್ ತಾಗಿದ್ದು ಬೆಂಕಿ ಹೊತ್ತಿಕೊಂಡು ಚಾಲಕ ಕೂಡ ಸಾವನ್ನಪ್ಪಿದ್ದಾನೆ.
ಟಿಪ್ಪರ್ ಗೆ ಬೆಂಕಿ ಹತ್ತಿಕೊಂಡ ಪರಿಣಾಮ ರೈಲು ಸಂಚಾರಕ್ಕಾಗಿ ಅಳವಡಿಸಿದ್ದ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿವೆ. ಇದರಿಂದಾಗಿ ಶಿವಮೊಗ್ಗದಿಂದ ಯಶವಂತಪುರಕ್ಕೆ ತೆರಳುತ್ತಿದ್ದ ಜನ ಶತಾಬ್ದಿ ಮತ್ತು ತಾಳಗುಪ್ಪದಿಂದ ಮೈಸೂರಿಗೆ ಹೊರಟಿದ್ದ ಎಕ್ಸ್ಪ್ರೆಸ್ ರೈಲು 2 ಗಂಟೆಗೂ ಅಧಿಕ ಸಮಯ ನಿಂತಲ್ಲೇ ನಿಲ್ಲುವಂತಾಗಿದೆ. ಈ ನಡುವೆ ರೈಲಿನಲ್ಲಿದ್ದ 75 ವರ್ಷದ ವೃದ್ಧರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ವಿದ್ಯುತ್ ತಂತಿ ದುರಸ್ತಿ ಮಾಡಿದ ನಂತರ ರೈಲುಗಳ ಸಂಚಾರ ಪುನಾರಂಭವಾಗಿದೆ.