ಚೆನ್ನೈ: ತಮಿಳುನಾಡಿನ ವಿರುಧುನಗರ ಜಿಲ್ಲೆಯ ವೆಂಬಕೊಟ್ಟೈ ಬಳಿ ಶನಿವಾರ ಪಟಾಕಿ ತಯಾರಿಸುತ್ತಿದ್ದ ಮನೆಯೊಳಗೆ ಸ್ಫೋಟ ಸಂಭವಿಸಿ ಮೂವರು ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ವಿಜಯಕರಿಶಾಲ್ಕುಲಂ ಪ್ರದೇಶದ ಮನೆಯೊಳಗೆ ಕಾರ್ಮಿಕರ ಗುಂಪೊಂದು ಪಟಾಕಿ ತಯಾರಿಸುವಲ್ಲಿ ನಿರತರಾಗಿದ್ದಾಗ ಸ್ಫೋಟಕಗಳು ಇದ್ದಕ್ಕಿದ್ದಂತೆ ಸ್ಫೋಟಗೊಂಡವು. ಸ್ಫೋಟದಿಂದ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ವೇಗವಾಗಿ ಹರಡಿದೆ. ಭಾಗಶಃ ಸಿದ್ಧಪಡಿಸಿದ ಪಟಾಕಿಗಳು ಸ್ಫೋಟಗೊಂಡಿದ್ದು, ಸ್ಫೋಟದ ಪರಿಣಾಮ ಕಟ್ಟಡದ ಕೆಲವು ಭಾಗಗಳು ನಾಶವಾಗಿವೆ
ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಬ್ಬರು ತೀವ್ರ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ಪೊಲೀಸರು ರಕ್ಷಿಸಿ ಚಿಕಿತ್ಸೆಗಾಗಿ ಶಿವಕಾಶಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ವಿರುಧುನಗರ ಜಿಲ್ಲೆ, ವಿಶೇಷವಾಗಿ ಶಿವಕಾಶಿ-ಸತ್ತೂರು ಬೆಲ್ಟ್ ಅನ್ನು ದೇಶದ ಪಟಾಕಿ ಉತ್ಪಾದನಾ ಕೇಂದ್ರ ಎಂದು ಕರೆಯಲಾಗುತ್ತದೆ, ಆದರೆ ಸ್ಫೋಟಕಗಳ ಅಸುರಕ್ಷಿತ ಸಂಗ್ರಹಣೆ, ಅತಿಯಾದ ದಾಸ್ತಾನು ಅಥವಾ ವಸತಿ ಕಟ್ಟಡಗಳಂತಹ ಅನಧಿಕೃತ ಸ್ಥಳಗಳಲ್ಲಿ ನಡೆಸಲಾಗುತ್ತಿರುವ ಉತ್ಪಾದನಾ ಚಟುವಟಿಕೆಗಳಿಂದ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ.