ಬೆಂಗಳೂರು: ದೂರುದಾರನಿಂದ ಒಂದು ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಇನ್ಸ್ಪೆಕ್ಟರ್, ಪಿಎಸ್ಐ ಸೇರಿ ಮೂವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ರಾಮಮೂರ್ತಿನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಾಜಶೇಖರ್(48), ಪಿಎಸ್ಐ ರುಮಾನ್ ಪಾಷಾ(32) ಹಾಗೂ ಖಾಸಗಿ ವ್ಯಕ್ತಿ ಡಿಜೆ ಹಳ್ಳಿಯ ಇಮ್ರಾನ್ ಬಾಬು(32) ಬಂಧಿತ ಆರೋಪಿಗಳು. ಕೆಆರ್ ಪುರ ನಿವಾಸಿ ಮಂಜುನಾಥ್ ಎಂಬವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಲಂಚ ಸಹಿತ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣವೊಂದರ ಸಂಬಂಧ ಇನ್ಸ್ಪೆಕ್ಟರ್ ರಾಜಶೇಖರ್ ಮತ್ತು ಪಿಎಸ್ಐ ರುಮಾನ್ ಪಾಷಾ ಹಾಗೂ ಇಮ್ರಾನ್ ಬಾಬು ದೂರುದಾರರ ಬಳಿ ಎರಡು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಶನಿವಾರ ಸಂಜೆ ದೂರುದಾರನಿಂದ ಒಂದು ಲಕ್ಷ ರೂ. ಸ್ವೀಕರಿಸುವಾಗ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.