ಬೆಂಗಳೂರು: ಕೇಂದ್ರ ಸರ್ಕಾರದಿಂದ ಬರಬೇಕಾದ ಪಿಂಚಣಿ ಎರಡು ವರ್ಷದಿಂದ ರಾಜ್ಯಕ್ಕೆ ಕೊಟ್ಟಿಲ್ಲ. ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರದಿಂದಲೇ ಹಣ ಬಾರದೇ ಇದ್ದರೆ ಹೇಗೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದ ಸಮ್ಮೇಳನಾ ಕೊಠಡಿಯಲ್ಲಿ ನಡೆದ ರಾಜ್ಯ ಮಟ್ಟದ ದಿಶಾ ಸಮಿತಿ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯ ಸರ್ಕಾರವೇ ಬಹುತೇಕ ಹಣ ಕೊಡುವ ಯೋಜನೆಗಳಿಗೆ ಪ್ರಧಾನಿ ಮತ್ತು ಕೇಂದ್ರದ ಹೆಸರಿದೆ. ಆದರೂ ಚೂರು, ಪಾರು ಶೇ ಕೇಂದ್ರದ ಹಣವೂ ಬರುತ್ತಿಲ್ಲ. ಈ ನಿರಂತರ ಅನ್ಯಾಯ ಪ್ರಶ್ನಿಸಬೇಕಲ್ಲವಾ ನೀವು ಎಂದರು.
ಕೇಂದ್ರ ಸರ್ಕಾರಕ್ಕೆ , ಕೇಂದ್ರದ ಮಂತ್ರಿಗಳಿಗೆ ಮತ್ತು ಪ್ರಧಾನ ಮಂತ್ರಿಯವರಿಗೆ ರಾಜ್ಯ ಸರ್ಕಾರದಿಂದ ಬರೆದ ಪತ್ರಗಳ ಮಾಹಿತಿ ನೀಡಿದ ಸಿಎಂ, ಪತ್ರವನ್ನು ಸಭೆಯಲ್ಲಿ ಓದಿ ಸಂಸದರ ಗಮನ ಸೆಳೆದರು.
15 ನೇ ಹಣಕಾಸು ಆಯೋಗದಲ್ಲಿ 5495 ಕೋಟಿ ರೂಪಾಯಿ ವಿಶೇಷ ಅನುದಾನ ಕೊಡಬೇಕು, ಕೆರೆ ಮತ್ತು ಫೆರಿಫೆರಲ್ ರಿಂಗ್ ರಸ್ತೆಗೆ ಕೊಡಬೇಕಾದ ಹಣ ಸೇರಿ ಒಟ್ಟು 11495 ಕೋಟಿ ರೂಪಾಯಿ ಕೇಂದ್ರದಿಂದ ಬರಬೇಕಿತ್ತು. ಏನನ್ನೂ ಕೊಡ್ತಾ ಇಲ್ಲ. ನಾವು ರಾಜ್ಯದಿಂದ 4.5 ಲಕ್ಷ ಕೋಟಿ ತೆರಿಗೆ ಕೊಟ್ಟರೂ ರಾಜ್ಯಕ್ಕೆ ಸಣ್ಣ ನೆರವೂ ಕೇಂದ್ರದಿಂದ ಬರುವುದಿಲ್ಲ, ಕೇಂದ್ರ ಪುರಸ್ಕೃತ ಯೋಜನೆಗಳಿಗೂ ಹಣ ಕೊಡುವುದಿಲ್ಲ, ಆದರೆ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಅಂತ ನೀವೇ ಹೊರಗೆ ಆರೋಪ ಮಾತಾಡ್ತೀರಿ ಎಂದು ಟೀಕಿಸಿದರು.
ನಾನೇ ಎರಡು ಬಾರಿ ವಿತ್ತ ಸಚಿವರಾದ ನಿರ್ಮಲಾ ಸೀತರಾಮನ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದರೂ ಹಣ ಬಿಡುಗಡೆ ಮಾಡಿಲ್ಲ. ರಾಜ್ಯದ ಸಂಸದರು ಒಟ್ಟಾಗಿ ಇದನ್ನು ಕೊಡಿಸಲು ಯತ್ನಿಸಬೇಕು. ಎರಡು ವರ್ಷದಿಂದ ರಾಜ್ಯದ ಒಬ್ಬನೇ ಒಬ್ಬ ಸಂಸದ ರಾಜ್ಯದ ಪರವಾಗಿ ಮಾತನಾಡಿಲ್ಲ. ನಿಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ ಎಂದು ಗರಂ ಆದರು.
ರಾಜ್ಯ ಸರ್ಕಾರ ನಿರಂತರವಾಗಿ ಒಟ್ಟು 5665 ಕೋಟಿ ಪಿಂಚಣಿ ಕೊಡುತ್ತಲೇ ಬರುತ್ತದೆ. ಆದರೆ, 559 ಕೋಟಿ ಮಾತ್ರ ಕೇಂದ್ರ ಸರ್ಕಾರ ಕೊಡುತ್ತದೆ. ಈ ಸಣ್ಣ ಮೊತ್ತವನ್ನೂ ಕೇಂದ್ರ ಸರ್ಕಾರಕ್ಕೆ ಕೊಡಲು ಸಾಧ್ಯವಾಗುತ್ತಿಲ್ಲ. ಇದನ್ನೂಬಾಕಿ ಉಳಿಸಿಕೊಂಡಿರುವುದು ಯಾಕೆ? ಎಂದು ಕೇಳಿದರು.
2024-25ರ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಡಿ ರಾಜ್ಯದ ಅನುದಾನ 24960 ಕೋಟಿ ರೂಪಾಯಿಗಳು, ಕೇಂದ್ರದ ಅನುದಾನ 22758ಕೋಟಿ ರೂಪಾಯಿಗಳಿದ್ದು ಕೇಂದ್ರದಿಂದ 18561ಕೋಟಿ ಮಾತ್ರ ಬಿಡುಗಡೆ ಆಗಿದೆ 4195 ಕೋಟಿ ರೂಪಾಯಿಗಳು ಬಿಡುಗಡೆ ಆಗಿರುವುದಿಲ್ಲ. ರಾಜ್ಯಕ್ಕೆ ಬರಬೇಕಾಗಿರುವ ಹಣವನ್ನು ಸರಿಯಾಗಿ ಬಿಡುಗಡೆ ಮಾಡದಿದ್ದರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು .
ಭದ್ರ ಮೇಲ್ದಂಡೆ ಯೋಜನೆಗೆ 2023-24ರ ಕೇಂದ್ರ ಬಜೆಟ್ ನಲ್ಲಿ 5360 ಕೋಟಿ ಅನುದಾನ ಘೋಷಣೆ ಹಾಗಿದ್ದರೂ ಒಂದು ರೂಪಾಯಿ ಕೂಡಾ ಈವರೆಗೂ ಬಿಡುಗಡೆ ಆಗಿರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಎರಡು ಬಾರಿ ನಿಯೋಗದೊಂದಿಗೆ ಭೇಟಿ ಮಾಡಿದ್ದರೂ ಪ್ರಯೋಜನವಾಗಿಲ್ಲ.
ದಿಶಾ ಸಮಿತಿ ಸದಸ್ಯರು ರಾಜ್ಯಕ್ಕೆ ಕೇಂದ್ರದ ಪಾಲನ್ನು ತರುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಬೇಕು ಎಂದು ಸೂಚಿಸಿದರು.
ಸಾಮಾಜಿಕ ಭದ್ರತಾ ಯೋಜನೆಯಡಿ ವಿಧವಾ ಪಿಂಚಣಿ, ವೃದ್ದಾಪ್ಯ ಪಿಂಚಣಿ, ಅಂಗವಿಕಲರ ಪಿಂಚಣಿ ಯೋಜನೆಗಳಿಗೆ ರಾಜ್ಯದ ಅನುದಾನ 5665.95 ಕೋಟಿ, ಕೇಂದ್ರದ ಅನುದಾನ 559.61ಕೋಟಿ ಆದರೆ ಕೇಂದ್ರದಿಂದ ಬಿಡುಗಡೆ ಆಗಿರುವುದು 113.92ಕೋಟಿ ಮಾತ್ರ . ಸಾಮಾಜಿಕ ಯೋಜನೆಗಳಲ್ಲೂ ಕಡಿತ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.
ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸಕಾಲದಲ್ಲಿ ಹಣ ಬಿಡುಗಡೆ ಆಗದಿದ್ದರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಹೇಗೆ? ಎಂದು ಸಮಿತಿ ಸದಸ್ಯರನ್ನು ಪ್ರಶ್ನಿಸಿದರು.
ಇದೇ ವೇಳೆ ರಾಜ್ಯದಲ್ಲಿ ನರೇಗಾ ಯೋಜನೆ ಮಾಡಿ ಅಕ್ರಮ ಎಸಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು, ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚನೆ ನೀಡಿದರು.