ಚಿಕ್ಕಮಗಳೂರು: ಶ್ರೀಗಂಧದ ತೋಟಕ್ಕೆ ಪರಿಹಾರ ನಿಗದಿಯಲ್ಲಿ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ರೈತನೊಬ್ಬ ಹೈಟೆನ್ಶ್ನ್ ವಿದ್ಯುತ್ ಮಾರ್ಗದ ಟವರ್ ಏರಿ ಕುಳಿತು ಪ್ರತಿಭಟನೆ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲೆಯ ತರೀಕೆರೆ ತಾಲೂಕಿನ ಹುಳಿಯೂರು ಗ್ರಾಮದಲ್ಲಿ ನಡೆದಿದೆ.
ಪ್ರತಿಭಟನೆ ನಡೆಸುತ್ತಿದ್ದ ರೈತರ ಬ್ಯಾನರ್ ಗಳನ್ನು ಪೊಲೀಸರು ಕಿತ್ತು ಹಾಕುತ್ತಿದ್ದಂತೆ ಇನ್ನಷ್ಟು ಆಕ್ರೋಶ ಗೊಂಡಿರುವ ರೈತರು ಹೋರಾಟ ತೀವ್ರಗೊಳಿಸಿದ್ದಾರೆ. ಈ ನಡುವೆ ಪೊಲೀಸರ ಕ್ರಮ ಖಂಡಿಸಿ ರೈತರೊಬ್ಬರು ಟವರ್ ಏರಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ಟಿ.ಎನ್.ವಿಶುಕುಮಾರ್ ಟವರ್ ಏರಿ ಕುಳಿತು ಪ್ರತಿಭಟನೆ ನಡೆಸುತ್ತಿರುವ ರೈತ. ಪೆಟ್ರೋಲ್ ತುಂಬಿದ್ದ ಬಾಟಲಿಯನ್ನು ಕತ್ತಿಗೆ ಕಟ್ಟಿಕೊಂಡು ಪೊಲಿಸರು ಹತ್ತಿರ ಬಂದರೆ ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ರೈತನ ಮನವೊಲಿಸುವ ಯತ್ನ ನಡೆಸಿದ್ದಾರೆ. ಮೂರು ಎಕರೆಗೂ ಹೆಚ್ಚು ಜಾಗದಲ್ಲಿ 22 ರೈತರು ಶ್ರೀಗಂಧದ ಮರ ಬೆಳೆಸಿದ್ದರು. ಇದೀಗ ಆ ಎಲ್ಲಾ ಜಾಗ ರಾಷ್ಟ್ರೀಯ ಹೆದ್ದಾರಿಗೆ ಸ್ವಾಧೀನವಾಗಿದ್ದು, ಕಡಿಮೆ ಪರಿಹಾರ ಘೋಷಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಪರಿಹಾರ ಹೆಚ್ಚಳ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.