ಮಂಡ್ಯ: ಕ್ಷುಲ್ಲಕ ಕಾರಣಕ್ಕೆ ಪತಿ, ಪತ್ನಿ ಜಗಳವಾಡಿದ್ದಕ್ಕೆ ಗ್ರಾಮದ ಮುಖಂಡರು ದಂಪತಿಯ ತಲೆ ಬೋಳಿಸಿ ಐದು ಸಾವಿರ ರೂಪಾಯಿ ದಂಡ ವಿಧಿಸಿದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿಯ ದ್ಯಾವಪಟ್ಟಣ ಗ್ರಾಮದಲ್ಲಿ ನಡೆದಿದ್ದು, ಬಡವಾಗಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಐವರ ವಿರುದ್ಧ ಕೇಸು ದಾಖಲಾಗಿದೆ.
ಆಗಸ್ಟ್ 17ರಂದು ಬೆಳಗ್ಗೆ 6 ಗಂಟೆ ಸಮಯದಲ್ಲಿ ಮಹಿಳೆ ಮತ್ತು ಮಕ್ಕಳು ಕುಡಿತದ ವಿಚಾರವಾಗಿ ಪತಿಯೊಂದಿಗೆ ಜಗಳವಾಡಿದ್ದಾರೆ. ಆಗ ಪತಿಯ ಬಲಗಾಲಿನ ಚಪ್ಪಲಿ ಆಕಸ್ಮಿಕವಾಗಿ ಪತ್ನಿಗೆ ತಗುಲಿದೆ. ಜಗಳದ ಬಗ್ಗೆ ಗ್ರಾಮದ ಯಜಮಾನರುಗಳಿಗೆ ತಿಳಿಸಿ ಗಂಡನಿಗೆ ಬುದ್ಧಿವಾದ ಹೇಳಿ ಎಂದು ಮಹಿಳೆ ಮನವಿ ಮಾಡಿದ್ದಾರೆ. ಆಗ ಗ್ರಾಮದ ಯಜಮಾನರು ನಿನ್ನ ಪತಿ ಯಾರದೋ ಮಾತು ಕೇಳಿ ನಿನಗೆ ಚಪ್ಪಲಿಯಲ್ಲಿ ಹೊಡೆದಿದ್ದಾನೆ. ಆದ್ದರಿಂದ ನಿನಗೆ ಮತ್ತು ನಿನ್ನ ಗಂಡನಿಗೆ ತಲಾ 5,000 ರೂ. ದಂಡ ಮತ್ತು ಇಬ್ಬರೂ ತಲೆ ಕೂದಲು ಬೋಳಿಸಿಕೊಳ್ಳುವಂತೆ ಗ್ರಾಮದ ನ್ಯಾಯದ ಕಟ್ಟೆ ಪಂಚಾಯಿತಿಯಲ್ಲಿ ತೀರ್ಪು ನೀಡಿದ್ದಾರೆ.
ಒತ್ತಡ ಹೇರಿದ ಯಜಮಾನರು ನನ್ನ ಹಾಗೂ ನನ್ನ ಪತಿಯ ತಲೆ ಕೂದಲು ತೆಗೆಸಿದ್ದಾರೆ. ಇದರಿಂದಾಗಿ ಗ್ರಾಮದ ಬೀದಿಗಳಲ್ಲಿ ತಿರುಗಾಡಲು ನನಗೆ ತೊಂದರೆಯಾಗಿದೆ. ಊರಿನ ಯಜಮಾನರು ಗಂಡನಿಗೆ ಬುದ್ಧಿ ಹೇಳಲಿ ಎಂದು ಮನವಿ ಮಾಡಿದರೆ ನಮಗೆ ಅವಮಾನ ಮಾಡಿದ್ದು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೊಂದ ಮಹಿಳೆ ದೂರು ನೀಡಿದ್ದಾರೆ.
ಮಳವಳ್ಳಿ ತಾಲೂಕಿನ ಬೆಳಕವಾಡಿ ಠಾಣೆ ಪೊಲೀಸರು ದ್ಯಾವಪಟ್ಟಣ ಗ್ರಾಮದ ನಾಗಣ್ಣ, ಮಹದೇವ, ಕುಮಾರಸ್ವಾಮಿ, ಮಲ್ಲಯ್ಯ ಸೇರಿದಂತೆ ಐದು ಮಂದಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.