ಬೆಂಗಳೂರು : ಬೆಂಗಳೂರಿನಲ್ಲೊಂದು ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ಮನೆಯಲ್ಲಿ ಮಲಗಿದ್ದ ತಂದೆ, ತಾಯಿ, ಅಕ್ಕನಿಗೆ ವಿದ್ಯಾರ್ಥಿಯೋರ್ವ ಚಾಕು ಇರಿದಿದ್ದಾನೆ.
ಮನೆಯಲ್ಲಿ ಮಲಗಿದ್ದ ಅಕ್ಕ ಹಾಗೂ ತಾಯಿ, ತಂದೆ ಮೇಲೆ ಮಗ ಇದ್ದಕ್ಕಿದ್ದಂತೆ ಚಾಕು ಹಿಡಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಸೋಲದೇವಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮೇದರಹಳ್ಳಿಯಲ್ಲಿ ನಡೆದಿದೆ.
ವಿನಾಯಕ ಲೇಔಟ್ ನಿವಾಸಿ ಕೃಷ್ಣಮೂರ್ತಿ (51) ಪಾರ್ವತಮ್ಮ (48) ನಯನಾ (24) ಹಲ್ಲೆಗೆ ಒಳಗಾದವರು. ಮೂವರಿಗೂ ಕೂಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಿನ್ನೆ ನಸುಕಿನ ಜಾವ 3 ಗಂಟೆಗೆ ಸುಮಾರಿಗೆ ಈ ಘಟನೆ ನಡೆದಿದೆ. ಹರ್ಷ ಎಂಬ ವಿದ್ಯಾರ್ಥಿ ಪೋಷಕರ ಮೇಲೆಯೇ ಈ ಕೃತ್ಯ ಎಸಗಿದ್ದಾನೆ. ಚಾಕುವಿನಿಂದ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾನೆ. ಕಾರದ ಪುಡಿ ಎರಚಿ ಮಗನ ಕೃತ್ಯ ತಡೆಯಲು ಮುಂದಾದರೂ ಆತ ಹಲ್ಲೆ ಮಾಡುವುದನ್ನು ಬಿಡಲಿಲ್ಲ. ವಿಚಾರ ತಿಳಿದ ನೆರೆಹೊರೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಗಿಲು ಒಡೆದು ಮನೆಯವರನ್ನು ರಕ್ಷಿಸಿದ್ದಾರೆ. ಹರ್ಷ ಎಂಜಿನಿಯರಿಂಗ್ ಓದುತ್ತಿದ್ದನು. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.