ಬೆಳಗಾವಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್ ಕಳವು ಮಾಡಿದ್ದ ಕಳ್ಳರು ಅದರಲ್ಲಿದ್ದ ಆಧಾರ್ ಕಾರ್ಡ್ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡು 1.65 ಲಕ್ಷ ರೂಪಾಯಿ ವಂಚಿಸಿದ ಘಟನೆ ತಡವಾಗಿ ಬಳಕೆಗೆ ಬಂದಿದೆ.
ತಿಲಕವಾಡಿಯ ಅರ್ಚನಾ ತೆಲಂಗಾ ಅವರು ಫೆಬ್ರವರಿ 28ರಂದು ಬೆಳಗಾವಿಯಿಂದ ಆಂಧ್ರಪ್ರದೇಶದ ನಂದಿಹಾಳಕ್ಕೆ ಪ್ರಯಾಣಿಸಿದ್ದರು. ಮಾರ್ಗಮಧ್ಯೆ ಮೊಬೈಲ್, ಮೂರು ಸಾವಿರ ರೂಪಾಯಿ ನಗದು ಮತ್ತು ಆಧಾರ್ ಕಾರ್ಡ್ ಸೇರಿ ಹಲವು ದಾಖಲೆಗಳಿದ್ದ ಅವರ ವ್ಯಾನಿಟಿ ಬ್ಯಾಗ್ ಕಳುವಾಗಿತ್ತು. ಈ ಕುರಿತಾಗಿ ಅರ್ಚನಾ ನಂದಿಹಾಳ ಪೊಲೀಸ್ ಠಾಣೆಯಲ್ಲಿ ಮಾರ್ಚ್ 1ರಂದು ದೂರು ದಾಖಲಿಸಿ ಮೊಬೈಲ್ ಸಂಖ್ಯೆ ಬ್ಲಾಕ್ ಮಾಡಿಸಿದ್ದರು.
ಆದರೆ, ವ್ಯಾನಿಟಿ ಬ್ಯಾಗ್ ಕಳ್ಳತನವಾದ ಒಂದೇ ಗಂಟೆಯಲ್ಲಿ ಅರ್ಚನಾ ಅವರ ಆಧಾರ್ ಕಾರ್ಡ್ ಸಂಖ್ಯೆಯನ್ನು ದುರ್ಬಳಕೆ ಮಾಡಿಕೊಂಡ ಖದೀಮರು ಆನ್ಲೈನ್ ಬ್ಯಾಂಕಿಂಗ್ ದೃಢೀಕರಣ ಪಡೆದುಕೊಂಡು ಯೂನಿಯನ್ ಬ್ಯಾಂಕ್ ಮತ್ತು ಎಸ್.ಬಿ.ಐ. ಖಾತೆಯಲ್ಲಿದ್ದ ಒಟ್ಟು 1.65 ಲಕ್ಷ ರೂ ಹಣ ವರ್ಗಾಯಿಸಿಕೊಂಡಿದ್ದಾರೆ. ಈ ಕುರಿತಾಗಿ ಬೆಳಗಾವಿಯ ಸಿಇಎನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.