ಬಳ್ಳಾರಿ: ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ಬರದನಹಳ್ಳಿಯಲ್ಲಿ ಮೂವರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಿದ್ದಮ್ಮ(30), ಆರ್ಯ(4), ಅವನಿ(6), ಅಭಿಜ್ಞಾ(8) ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ. ಮೂವರು ಮಕ್ಕಳನ್ನು ಕೃಷಿಹೊಂಡಕ್ಕೆ ತಳ್ಳಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗಾವಿ ಮೂಲದ ಸಿದ್ದಮ್ಮ ಪತಿಯ ಜೊತೆಗೆ ಕುರಿ ಮೇಯಿಸಲು ಬಂದಿದ್ದರು. ಬರದನಹಳ್ಳಿಯ ರಾಘವೇಂದ್ರ ಎಂಬುವವರ ಜಮೀನಿನಲ್ಲಿ ಕುರಿ ಮಂದೆ ಹಾಕಿದ್ದರು. ಪತಿ ಕುಮಾರ್ ಜೊತೆಗೆ ನಿನ್ನೆ ಪತ್ನಿ ಸಿದ್ದಮ್ಮ ಗಲಾಟೆ ಮಾಡಿಕೊಂಡಿದ್ದರು ಎನ್ನಲಾಗಿದೆ.
ಗಲಾಟೆಯ ನಂತರ ಮೂವರು ಮಕ್ಕಳ ಜೊತೆಗೆ ಸಿದ್ದಮ್ಮ ಕುರಿ ಮೇಯಿಸಲು ತೆರಳಿದ್ದಾರೆ. ಕುರಿ ಮೇಯಿಸಲು ಹೋದಾಗಲೇ ಮಕ್ಕಳ ಜೊತೆಗೆ ಕೃಷಿ ಹೊಂಡಕ್ಕೆ ಹಾರಿದ್ದಾರೆ. ಸಂಜೆಯಾದರೂ ಕುರಿಗಳು, ಪತ್ನಿ, ಮಕ್ಕಳು ಹಿಂತಿರುಗದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಲಾಗಿದೆ. ಕೃಷಿ ಹೊಂಡದ ಬಳಿಯೇ ಕುರಿಗಳು ನಿಂತಿದ್ದರಿಂದ ಅನುಮಾನಗೊಂಡು ಕೃಷಿಹೊಂಡದಲ್ಲಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಗಾಬರಿಯಾದ ಪತಿ ಕುಮಾರ್ ತಮ್ಮ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.