ಶಿವಮೊಗ್ಗ: ಬೊಮ್ಮನಕಟ್ಟೆ ಅವಿನಾಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ವಿನೋಬಾನಗರ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಜೂನ್ 22ರಂದು ಶಿವಮೊಗ್ಗದ ಬೊಮ್ಮನಕಟ್ಟೆ ಬಡಾವಣೆಯಲ್ಲಿ ಅವಿನಾಶ್ ಎಂಬಾತನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಇದೀಗ ಈ ಪ್ರಕರಣ ಸಂಬಂಧ ಐವರು ಹಂತಕರನ್ನು ಬಂಧಿಸಲಾಗಿದೆ. ಬಂಧಿತರನ್ನು ಪ್ರವೀಣ್, ಸುನೀಲ್, ಆನಂದ್, ಜಿತೇಂದ್ರ, ಕಿರಣ್ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳು ಬೊಮ್ಮನಕಟ್ಟೆ ನಿವಾಸಿಗಳಾಗಿದ್ದು ಸ್ನೇಹಿತರಾಗಿದ್ದಾರೆ. ಕೊಲೆಯಾದ ಅವಿನಾಶ್, ಆರೋಪಿ ಪ್ರವೀಣ್ ಪತ್ನಿ ಜೊತೆ ಫೋನ್ ನಲ್ಲಿ ಮಾತನಾಡುತ್ತಿದ್ದ ಎಂಬ ಆರೋಪದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ. ಇನ್ನು ಆರೋಪಿಗಳಾದ ಪ್ರವೀಣ್ ಹಾಗೂ ಜಿತೇಂದ್ರ ಅಣ್ಣ-ತಮ್ಮಂದಿರು ಎಂದು ಪೊಲೀಸರು ತಿಳಿಸಿದ್ದಾರೆ.
ಅವಿನಾಶ್ ನನ್ನು ತಮ್ಮದೇ ಬೈಕ್ ನಲ್ಲಿ ಕರೆದುಕೊಂಡು ಬಂದಿದ್ದ ಆರೋಪಿಗಳು ಕೆರೆ ಏರಿ ಮೇಲೆ ಕುಳಿತು ಮದ್ಯಸೇವಿಸಿದ್ದಾರೆ. ಅವಿನಾಶ್ ಗೂ ಕಂಠಪೂರ್ತಿ ಕುಡಿಸಿದ್ದಾರೆ. ಬಳಿಕ ಆತನ ಜೊತೆ ಕಿರಿಕ್ ತೆಗೆದು, ತಮ್ಮ ಬಳಿ ಇದ್ದ ಚಾಕುವಿನಿಂದ ಆತನ ಕತ್ತು ಸೀಳಿದ್ದಾರೆ. ರಕ್ತದ ಮಡುವಿನಲ್ಲಿ ಆತ ಬಿದ್ದು ಒದ್ದಾಡುವವರೆಗೂ ಅಲ್ಲಿಯೇ ಇದ್ದು, ಬಳಿಕ ಎಸ್ಕೇಪ್ ಆಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.