‘ಭಾರತದ ಸಿಲಿಕಾನ್ ವ್ಯಾಲಿ’ ಎಂದೇ ಕರೆಯಲ್ಪಡುವ ಬೆಂಗಳೂರಿನಲ್ಲಿ ಈಗ ಜಲಕ್ಷಾಮ. ನಗರೀಕರಣ ಮತ್ತು ಹೆಚ್ಚುತ್ತಿರುವ ಜನಸಂಖ್ಯೆ ಬೆಂಗಳೂರನ್ನು ಬರಗಾಲಕ್ಕೆ ತಳ್ಳಿದೆ. ಹನಿ ಹನಿ ನೀರಿಗಾಗಿ ಬೆಂಗಳೂರಿನ ಜನತೆ ಪರದಾಡ್ತಿದ್ದಾರೆ. ಸ್ನಾನ, ಅಡುಗೆಗೂ ಹನಿ ನೀರಿಲ್ಲದಂತಹ ಸ್ಥಿತಿಗೆ ನಗರ ತಲುಪಿದೆ. ತೀವ್ರ ನೀರಿನ ಕೊರತೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ, ಅಷ್ಟೇ ಅಲ್ಲ ನಗರದ ವ್ಯಾಪಾರದ ಮೇಲೂ ಪರಿಣಾಮ ಬೀರಲಾರಂಭಿಸಿದೆ.
ಆರ್ಥಿಕತೆಗೆ ಹೊಡೆತ ನೀಡುತ್ತಿದೆ ಜಲಕ್ಷಾಮ !
ಬೆಂಗಳೂರಿನಲ್ಲಿ ನೀರಿನ ಸಮಸ್ಯೆಯಿಂದಾಗಿ ಜನರು ನಗರವನ್ನು ತೊರೆಯಬೇಕಾದ ಅನಿವಾರ್ಯತೆ ಎದುರಾಗಿದೆ. ನಗರದ ಆಸ್ತಿ ದರಗಳು ಕುಸಿಯಲಾರಂಭಿಸಿವೆ. ತಜ್ಞರ ಪ್ರಕಾರ ನೀರಿನ ಸಮಸ್ಯೆಯಿಂದಾಗಿ ಬೆಂಗಳೂರಿನಲ್ಲಿ ಆಸ್ತಿ ದರಗಳು ಶೇ.10 ರಿಂದ 15 ರಷ್ಟು ಕುಸಿದಿವೆ. ಸಮಸ್ಯೆ ಹೀಗೆಯೇ ಮುಂದುವರಿದರೆ ರಿಯಲ್ ಎಸ್ಟೇಟ್ ಕ್ಷೇತ್ರ ಭಾರೀ ನಷ್ಟ ಅನುಭವಿಸಲಿದೆ. ಅದರಲ್ಲೂ ಬೆಂಗಳೂರು ಪೂರ್ವ ಮತ್ತು ಮಧ್ಯ ಭಾಗದಲ್ಲಿ ನೀರಿನ ಸಮಸ್ಯೆ ವಿಪರೀತವಾಗಿದೆ. ಈ ಭಾಗದಲ್ಲಿ ಆಸ್ತಿ ದರದ ಜತೆಗೆ ಬಾಡಿಗೆ ದರವೂ ಕುಸಿಯಲಾರಂಭಿಸಿದೆ.
ಬೀದಿಯ ಎರಡು ಕೋಣೆಗಳ ಮನೆಯಾಗಿರಲಿ ಅಥವಾ ಕೋಟಿಗಟ್ಟಲೆ ಬೆಲೆಬಾಳುವ ಬಂಗಲೆಯಾಗಲಿ, ಬೆಂಗಳೂರಿನ ನೀರಿನ ಸಮಸ್ಯೆ ಎಲ್ಲರನ್ನೂ ಬೀದಿಯಲ್ಲಿ ನೀರಿಗಾಗಿ ಕ್ಯೂ ನಿಲ್ಲುವಂತೆ ಮಾಡಿದೆ. ಬೆಂಗಳೂರಿನ ಬಗ್ಗೆಯೇ ಜನರು ಭ್ರಮನಿರಸನಗೊಳ್ಳುವಷ್ಟರ ಮಟ್ಟಿಗೆ ಸಮಸ್ಯೆ ಹೆಚ್ಚಾಗತೊಡಗಿದೆ. ಜನರು ಬೆಂಗಳೂರು ಬಿಡಲು ತಯಾರಿ ನಡೆಸುತ್ತಿದ್ದಾರೆ. ಇದು ಇಲ್ಲಿನ ಮನೆಗಳ ಬಾಡಿಗೆ ಮೇಲೂ ಪರಿಣಾಮ ಬೀರಿದೆ. ಒಂದು ಕಾಲದಲ್ಲಿ ತನ್ನ ಹೈ-ಫೈ ಬಾಡಿಗೆ ದರಗಳಿಂದ ಸುದ್ದಿಯಲ್ಲಿದ್ದ ಬೆಂಗಳೂರಿನಲ್ಲಿ ಈಗ ಶೇ. 15ರಷ್ಟು ಬಾಡಿಗೆ ಕುಸಿದಿದೆ.
ನೀರಿನ ಕೊರತೆ ದೈನಂದಿನ ಜೀವನ ಮತ್ತು ವ್ಯಾಪಾರದ ಮೇಲೆ ಆಳವಾಗಿ ಪರಿಣಾಮ ಬೀರಿದೆ. ನೀರಿನ ಕೊರತೆ ಎದುರಿಸುತ್ತಿರುವ ಜನರು ಕಚೇರಿಗೆ ಹೋಗಲು ನಿರಾಕರಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಇನ್ಫೋಸಿಸ್ ಮತ್ತು ವಿಪ್ರೋದಂತಹ ದೊಡ್ಡ ಟೆಕ್ ಕಂಪನಿಗಳಿವೆ. ನೀರಿನ ಬಿಕ್ಕಟ್ಟು ಈ ಕಂಪನಿಗಳಿಗೂ ಹೊಡೆತ ಕೊಟ್ಟಿದೆ.
ಬೆಂಗಳೂರಿನ ಪ್ರಸ್ತುತ ನೀರಿನ ಬಿಕ್ಕಟ್ಟು ಮೂರ್ನಾಲ್ಕು ದಶಕಗಳಲ್ಲೇ ಅತ್ಯಂತ ಕೆಟ್ಟ ಮಟ್ಟವನ್ನು ತಲುಪಿದೆ. Google, Microsoft, JP Morgan, ANZ, Cisco, Intel, IBM, Accenture, Goldman Sachs ನಂತಹ ದೊಡ್ಡ ಐಟಿ ಮತ್ತು ಹಣಕಾಸು ಕಂಪನಿಗಳು ಬೆಂಗಳೂರಿನಲ್ಲಿ ತಮ್ಮ ಕಚೇರಿಗಳನ್ನು ಹೊಂದಿವೆ. ಈ ಕಂಪನಿಗಳು ಬೆಂಗಳೂರನ್ನು ಬಿಟ್ಟು ಅಹಮದಾಬಾದ್, ಜೈಪುರ, ಮೈಸೂರು, ಮಧುರೈ ಮತ್ತು ನಾಗ್ಪುರದಂತಹ ಸಿಟಿಗಳಿಗೆ ಶಿಫ್ಟ್ ಆಗಬಹುದು.