ಕೊಪ್ಪಳ: ಕೊಪ್ಪಳ ಜಿಲ್ಲೆಗೆ ಬೇಡಿಕೆಯ ಅನ್ವಯ ರಸಗೊಬ್ಬರಗಳು ಸರಬರಾಜಾಗುತ್ತಿದ್ದು, ಕೃಷಿ ಪರಿಕರ ಮಾರಾಟ ಮಳಿಗೆಗಳು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ವಿತರಿಸಲಾಗುತ್ತಿದೆ. ರಸಗೊಬ್ಬರಗಳ ವಿತರಣೆಯನ್ನು ಕೃಷಿ ಇಲಾಖೆಯಿಂದ ಉಸ್ತುವಾರಿ ಮಾಡಲಾಗುತ್ತಿದ್ದು, ಉಲ್ಲಂಘನೆಗಳು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.
ಅದರಂತೆ ಯೂರಿಯಾ ರಸಗೊಬ್ಬರವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿರುವ ಕುರಿತು ಸಹಾಯಕ ಕೃಷಿ ನಿರ್ದೇಶಕರು(ಜಾರಿದಳ) ಇವರ ಪರಿಶೀಲನೆಯಲ್ಲಿ ಕಂಡುಬಂದಿದ್ದು, ಮಾರಾಟಗಾರರಾದ ಕನಕಗಿರಿ ತಾಲ್ಲೂಕಿನ ಮುಸಲಾಪುರದ ಮೆ|| ಸಜ್ಜಲಶ್ರೀ ಆಗ್ರೋ ಕೇಂದ್ರ ಮತ್ತು ಕೊಪ್ಪಳ ತಾಲ್ಲೂಕಿನ ಇರಕಲ್ಗಡಾದ ಮೆ|| ಸ್ಪಂದನ ಆಗ್ರೋ ಟ್ರೇಡರ್ಸ್ ಇವರ ರಸಗೊಬ್ಬರ ಮಾರಾಟ ಪರವಾನಿಗೆಯನ್ನು ರಸಗೊಬ್ಬರ ನಿಯಂತ್ರಣ ಆದೇಶ 1985 ರ ಕ್ಲಾಸ್ 3, 4, 5, 8 ಮತ್ತು 35 ರ ಉಲ್ಲಂಘನೆಗಳಿಗಾಗಿ ಅಮಾನತ್ತುಗೊಳಿಸಲಾಗಿದೆ. ರಸಗೊಬ್ಬರ ನಿಯಂತ್ರಣ ಆದೇಶ 1985 ರ ಉಲ್ಲಂಘನೆಗಾಗಿ ಇವರ ರಸಗೊಬ್ಬರ ಮಾರಾಟ ಪರವಾನಿಗೆಗಳನ್ನು ರದ್ದುಗೊಳಿಸಲಾಗಿರುತ್ತದೆ.
ರೈತರು ರಸಗೊಬ್ಬರ ಖರೀದಿಸುವ ಸಮಯದಲ್ಲಿ ಮಾರಾಟಗಾರರು ಖರೀದಿ ಬಿಲ್ ಅನ್ನು ನೀಡದೇ ಇದ್ದಲ್ಲಿ ಅಥವಾ ಕೃಷಿ ಪರಿಕರಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಕಂಡುಬಂದಲ್ಲಿ ಅಥವಾ ಕಳಪೆ ಗುಣಮಟ್ಟದ ರಸಗೊಬ್ಬರ ಕಂಡುಬಂದಲ್ಲಿ ಕೃಷಿ ಅಧಿಕಾರಿ ಅಥವಾ ಸಹಾಯಕ ಕೃಷಿ ನಿರ್ದೇಶಕರು ಅಥವಾ ಸಹಾಯಕ ಕೃಷಿ ನಿರ್ದೇಶಕರು(ಜಾರಿದಳ), ಜಂಟಿ ಕೃಷಿ ನಿರ್ದೇಶಕರ ಕಛೇರಿ, ಕೊಪ್ಪಳ ಮೊಬೈಲ್ ಸಂಖ್ಯೆ: 8277932117 ಇವರನ್ನು ಸಂಪರ್ಕಿಸಿ ಮಾಹಿತಿ ನೀಡಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.