ಬೆಂಗಳೂರು: ಐದು ವರ್ಷವೂ ನಾನೇ ಸಿಎಂ. ಪವರ್ ಶೇರಿಂಗ್ ಚರ್ಚೆ ಇಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯಲ್ಲಿ ಕುಳಿತು ನೀಡಿರುವ ಹೇಳಿಕೆ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯನವರು ಕೊಟ್ಟ ಸಂದೇಶ ಮ್ಯಾಚ್ ಕ್ಲೋಸ್ ಅಂತ. ಇಂದಿನಿಂದ ಬದಲಾವಣೆ ಚರ್ಚೆ ನಿಲ್ಲಬೇಕು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಬದಲಾವಣೆ ಬಗ್ಗೆ ಯಾರು ಮಾತನಾಡುತ್ತಿದ್ದರೋ ಅವರಿಗೂ ಇದು ಕ್ಲೀಯರ್ ಮೆಸೇಜ್. ಇಂದಿನಿಂದ ಬದಲಾವಣೆ ಚರ್ಚೆ ಕ್ಲೋಸ್ ಆಗಬೇಕು ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳಿದ ಮೇಲೆ ಎಲ್ಲದಕ್ಕೂ ಇತಿಶ್ರೀ ಇದ್ದಂತೆ. ನಾಯಕತ್ವ ಬದಲಾವಣೆ ವಿಚಾರಕ್ಕೆ ಇನ್ನು ಇತಿಶ್ರೀ ಹಾಅಡಬೇಕು. ಸಿಎಂ ಸಿದ್ದರಾಮಯ್ಯ ಹೇಳಿರುವುದರಲ್ಲಿ ಹೊಸದೇನಿಲ್ಲ. ಈಗ ಹೇಳಬೇಕಾದ ಸಂದರ್ಭ ಬಂದಿದೆ. ಅದಕ್ಕೆ ಹೇಳಿದ್ದಾರೆ. ಸಿಎಂ ಬದಲಾವಣೆ ಚರ್ಚೆ ಎಲ್ಲಿಯೂ ಆಗಿಲ್ಲ. ಅಧಿಕಾರ ಹಂಚಿಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಶಾಸಕರು ನಾಯಕತ್ವ ಬದಲಾವಣೆ ಮಾಡಿ ಎಂದು ಹೇಳಿಲ್ಲ. ಸುರ್ಜೇವಾಲಾ ಮುಂದೆ ಎಲ್ಲಾ ಶಾಸಕರು ಅನುದಾನಕ್ಕೆ ಮಾಡಿರಬಹುದು. ಸಿಎಂ ಆಯ್ಕೆ ಮಾಡುವಾಗ ವೋಟಿಂಗ್ ಆಗಿತ್ತು. ವೋಟ್ ಹೆಚ್ಚಿದೆ ಅಂತಾ ಸಿದ್ದರಾಮಯ್ಯನವರನ್ನು ಸಿಎಂ ಮಾಡಿದ್ದಾರೆ. ಹೀಗಾಗಿ ಸಿಎಂ ಬೆಂಬಲಕ್ಕೆ ಹೆಚ್ಚು ಶಾಸಕರಿದ್ದಾರೆ. ಅದಕ್ಕೆ ಸಿಎಂ ಸಿದ್ದರಾಮಯ್ಯ ಇಂದು ಸ್ಪಷ್ಟವಾಗಿ ಹೇಳಿದ್ದು, ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ತಿಳಿಸಿದರು.