ಬೆಂಗಳೂರು: ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ಜೀವನ ಚರಿತ್ರೆ ಸಿನಿಮಾಗೆ ಸಿದ್ಧವಾಗುತ್ತಿದೆ. ಆದರೆ ಇದಕ್ಕೆ ಸಾಲುಮರದ ತಿಮ್ಮಕ್ಕ ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.
ಅನುಮತಿ ಪಡೆಯದೇ ತನ್ನ ಜೀವನ ಚರಿತ್ರೆ ಸಿನಿಮಾ ಮಾಡಲಾಗುತ್ತಿದ್ದು, ಇದಕ್ಕೆ ತಡೆಯೊಡ್ಡಬೇಕು ಎಂದು ಸಾಲುಮರದ ತಿಮ್ಮಕ್ಕ ಫಿಲ್ಮ್ ಚೇಂಬರ್ ಗೆ ದೂರು ನೀಡಿದ್ದಾರೆ.
ಒರಟ ಶ್ರೀ ನಿರ್ದೇಶನದಲ್ಲಿ ಇತ್ತೀಚೆಗೆಗಷ್ಟೇ ವೃಕ್ಷಮಾತೆ ಎಂಬ ಸಿನಿಮಾ ಸೆಟ್ಟೇರಿತ್ತು. ದಿಲೀಪ್ ಕುಮಾರ್ ಹೆಚ್.ಆರ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದರು. ಇದು ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಅವರ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಕೃತಿ ಆಧಾರಿತ ಸಿನಿಮಾ ಆಗಿದೆ ಎಂದು ಚಿತ್ರತಂಡ ತಿಳಿಸಿತ್ತು. ಇದರ ಬೆನ್ನಲ್ಲೇ ಇದೀಗ ಸಾಲುಮರದ ತಿಮ್ಮಕ್ಕ ತನ್ನ ಅನುಮತಿ ಪಡೆಯದೇ ಸಿನಿಮಾ ಮಾಡಲು ಮುಂದಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಫಿಲ್ಮ್ ಚೇಂಬರ್ ನಲ್ಲಿ ದೂರು ದಾಖಲಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಸಾಲುಮರದ ತಿಮ್ಮಕ್ಕ ಅವರ ದತ್ತುಪುತ್ರ ಉಮೇಶ್, ಒಂದು ತಿಂಗಳ ಹಿಂದೆ ದಿಲೀಪ್ ಕುಮಾರ್ ಹಾಗೂ ಒರಟ ಶ್ರೀ ಅವರು ಬಂದು ಸಿನಿಮಾ ಮಾಡುತ್ತೇವೆ ಅನುಮತಿ ಕೊಡಿ ಎದಿದ್ದರು. ನಾವು ಅನುಮತಿ ನೀಡಿರಲಿಲ್ಲ. ಹಲವು ನಿರ್ದೇಶಕರು ಇದೇ ರೀತಿ ಅನುಮತಿ ಕೇಳಿದ್ದರು. ಹಲವರು ಹಣ ನೀಡುವುದಾಗಿಯೂ ತಿಳಿಸಿದ್ದರು. ಸಾಲುಮರದ ತಿಮ್ಮಕ್ಕ ಅವರ ಜೀವನ ಚರಿತ್ರೆ ಆಗುವುದು ಒಂದೇ ಬಾರಿ. ಹೀಗಾಗಿ ವಿಶ್ವಮಟ್ಟಕ್ಕೆ ತಲುಪಬೇಕು. ಸೂಕ್ತ ನಟ-ನಟಿಯರಿಲ್ಲದೇ ಇದಕ್ಕೆ ಒಪ್ಪಿಗೆ ನೀಡಲು ಸಾಧ್ಯವಿಲ್ಲ ಎಂದಿದ್ದೆವು ಎಂದು ತಿಳಿಸಿದ್ದಾರೆ.
ನೆಲ್ಲಿಕಟ್ಟೆ ಸಿದ್ದೇಶ್ ಅವರು ಸಾಲುಮರದ ತಿಮ್ಮಕ್ಕನವರ ಕೃತಿ ಬರೆದಿದ್ದಾರೆ. ಇದು ಸುಳ್ಳಿನ ಕಂತೆ. ಈ ಪುಸ್ತಕ ಹಿಂಪಡೆಯುವಂತೆ ಈ ಹಿಂದೆಯೇ ಹೇಳಿದ್ದೆವು. ಈಗ ಚಿತ್ರತಂಡ ಈ ಪುಸ್ತಕ ಆಧಾರಿತ ಚಿತ್ರ ಮಾಡುತ್ತೇವೆ ಎನ್ನುತ್ತಿದೆ. ಈ ಪುಸ್ತಕವೇ ಸುಳ್ಳಿನ ಕಂತೆಯಾಗಿರುವಾಗ ನೈಜ ತಿಮ್ಮಕ್ಕನನ್ನು ತೋರಿಸುವುದು ಹೇಗೆ? ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಕೊಡಲ್ಲ. ನಾನು ಅನುಮತಿ ಕೊಡಲ್ಲ ಎಂದಿದ್ದಕ್ಕೆ ಚಿತ್ರತಂಡ ನನ್ನ ವಿರುದ್ಧ ಆರೋಪ ಮಾಡುತ್ತಿದೆ. ನಾವು ಮಾನನಷ್ಟ ಮೊಕದ್ದಮೆ ಹೂಡುತ್ತೇವೆ ಎಂದಿದ್ದಾರೆ.