ಬೆಂಗಳೂರು: ಕ್ಷಮೆ ಕೇಳದೇ ಉದ್ಧಟತನ ತೋರುತ್ತಿರುವ ನಟ ಕಮಲ್ ಹಾಸನ್ ಬಹಿರಂಗವಾಗಿ ಕ್ಷಮೆಯಾಚಿಸದಿದ್ದರೆ ಅವರ ಸಿನಿಮಾ ರಿಲೀಸ್ ಗೆ ಅವಕಾಶ ನೀಡಲ್ಲ ಎಂದು ನಿರ್ಮಾಪಕ ಸಾ.ರಾ.ಗೋವಿಂದು ಎಚ್ಚರಿಕೆ ನೀಡಿದ್ದಾರೆ.
ಫಿಲ್ಮ್ ಚೇಂಬರ್ ನಲ್ಲಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾ.ರಾ.ಗೋವಿಂದು, ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿರುವ ಕಮಲ್ ಹಾಸನ್, ಕನ್ನಡಿಗರ ಕ್ಷಮೆ ಕೇಳಿ ಎಂದರೆ, ಕ್ಷಮೆ ಕೇಳಲ್ಲ ಎಂದು ಹೇಳುವ ಮೂಲಕ ಮತ್ತಷ್ಟು ಉದ್ಧಟತನ ಮೆರೆದಿದ್ದಾರೆ. ಇಂತಹ ಉದ್ಧಟತನವನ್ನು ನಾವು ಸಹಿಸಲ್ಲ. ಅವರು ಕನ್ನಡಿಗರ ಬಳಿ ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಹೇಗೆ ಅವರ ಸಿನಿಮಾ ಬಿಡುಗಡೆ ಮಾಡ್ತಾರೆ ನಾವು ನೋಡುತ್ತೇವೆ. ಯಾವುದೇ ಕಾರಣಕ್ಕೂ ‘ಥಗ್ ಲೈಫ್’ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಗೆ ಅವಕಾಶ ಕೊಡಲ್ಲ ಎಂದು ಹೇಳಿದರು.
ಯಾರೇ ಆಗಲಿ, ಯಾವ ನಟ-ನಟಿಯರೇ ಆಗಿರಲಿ ಒಂದು ರಾಜ್ಯ, ಭಾಷೆ ವಿಚಾರವಾಗಿ ಮಾತನಾಡುವಾಗ ಎಚ್ಚರದಿಂದ ಇರಬೇಕು. ಅದರಲ್ಲಿಯೂ ಕಮಲ್ ಹಾಸನ್ ರವರಂತಹ ಹಿರಿಯ ನಟರು ಕನ್ನಡ ಭಾಷೆಯ ಬಗ್ಗೆ, ಕನ್ನಡಿಗರಿಗೆ ನೋವಾಗುವಂತೆ ಮತನಾಡಿದ್ದು ಖಂಡನೀಯ. ನಮಗೆ ಕಮಲ್ ಹಾಸನ್ ಬಗ್ಗೆ ಯಾವುದೇ ಕನಿಕರವಿಲ್ಲ. ಅವರು ಕ್ಷಮೆ ಕೇಳದಿದ್ದರೆ ಸಿನಿಮಾ ರಿಲೀಸ್ ಆಗಲ್ಲ ಎಂದು ಖಡಕ್ ಆಗಿ ಹೇಳಿದರು.
ಇವತ್ತು ಇಲ್ಲಾ, ನಾಳೆಯೊಳಗೆ ಅವರು ಕ್ಷಮೆ ಕೇಳಬೇಕು. ಮಾಧ್ಯಮಗಳ ಮೂಲಕ ಬಹಿರಂಗವಗಿ ಅವರು ಕ್ಷಮೆ ಕೇಳಲಿ ಇಲ್ಲವಾದಲ್ಲಿ ಯಾವುದೇ ಕಾರಣಕ್ಕೂ ಕನ್ನಡಿಗರು ಕ್ಷಮಿಸುವ ಮಾತಿಲ್ಲ, ಅವರ ಸಿನಿಮಾಗೆ ಅವಕಾಶ ಕೊಡುವುದಿಲ್ಲ ಎಂದರು.