ಚಿತ್ರದುರ್ಗ: ಒಳಾಂಗಣ ಚಿತ್ರೀಕರಣಕ್ಕೆ ಅನುಕೂಲವಾಗುವಂತೆ ಚಿತ್ರದುರ್ಗ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಅವಶ್ಯಕತೆ ಇರುವ ಭೂಮಿ ಮಂಜೂರು ಮಾಡುವಂತೆ ಶ್ರೀ ಕಂಠೀರವ ಸ್ಟುಡಿಯೋಸ್ ನಿಯಮಿತ ಅಧ್ಯಕ್ಷ ಮಹಬೂಬ್ ಪಾಷಾ ಅವರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
ಶ್ರೀ ಕಂಠೀರವ ಸ್ಟುಡಿಯೋಸ್ ನಿಯಮಿತವು ವಜ್ರಮಹೋತ್ಸವ ಆಚರಣೆಯನ್ನು ಆಚರಿಸುತ್ತಿರುವುದರಿಂದ, ಜ್ಞಾಪಕಾರ್ಥವಾಗಿ ಕೆಲವೊಂದು ಅಭಿವೃದ್ಧಿ ಪೂರಕವಾದಂತಹ ಕಾರ್ಯ ಯೋಜನೆ ಕೈಗೊಳ್ಳಬೇಕಾಗಿರುವುದರಿಂದ, ಚಿತ್ರದುರ್ಗ ಜಿಲ್ಲೆಯು ಹೊರಾಂಗಣ ಚಿತ್ರೀಕರಣಕ್ಕೆ ಸೂಕ್ತವಾದಂತಹ ಪ್ರದೇಶವಾಗಿದ್ದು, ಇಲ್ಲಿಯೇ ಒಳಾಂಗಣ ಚಿತ್ರೀಕರಣಕ್ಕೂ ಅನುಕೂಲವಾಗುವಂತೆ ಹಾಗೂ ಜಿಲ್ಲೆಯ ಪ್ರವಾಸೋದ್ಯಮ, ವ್ಯಾಪಾರ ವ್ಯವಹಾರಗಳಲ್ಲೂ ಕನಿಷ್ಟ ಅಭಿವೃದ್ಧಿ ನಿರೀಕ್ಷಿಸಬಹುದಾಗಿದೆ.
ಶ್ರೀ ಕಂಠೀರವ ಸ್ಟುಡಿಯೋಸ್ ನಿಯಮಿತ ಒಳಾಂಗಣ ಚಿತ್ರೀಕರಣಕ್ಕೆ ಅನುಕೂಲವಾಗುವಂತೆ ಚಿತ್ರದುರ್ಗ ಜಿಲ್ಲಾ ಕೇಂದ್ರದ ಸಮೀಪದಲ್ಲಿರುವಂತೆ, ಕನಿಷ್ಟ 25 ಎಕರೆ ಅನುಪಯುಕ್ತ ಭೂಮಿಯನ್ನು ರಸ್ತೆಗೆ ಅಭಿಮುಖವಾಗಿ (ರಾಜ್ಯ ಹೆದ್ದಾರಿ ಅಥವಾ ಜಿಲ್ಲಾ ಹೆದ್ದಾರಿಗಳಿಗೆ) ಹೊಂದುಕೊಂಡಂತೆ ಮಂಜೂರು ಮಾಡಿಕೊಡುವುದು. ಕಂದಾಯ ಇಲಾಖೆ ನಿಗದಿಪಡಿಸಿದ ದರವನ್ನು ರಾಜ್ಯ ಸರ್ಕಾರಿ ಸ್ವೌಮ್ಯದ ಉದ್ಯಮವಾಗಿರುವ ಶ್ರೀ ಕಂಠೀರವ ಸ್ಟುಡಿಯೋಸ್ ನಿಯಮಿತವು ಪಾವತಿಸಿ ಪರಭಾರೆ ಮಾಡಿಕೊಳ್ಳಲಿದ್ದು, ಆದುದರಿಂದ ಸಾಧ್ಯವಾದಷ್ಟು ಶೀಘ್ರವಾಗಿ ಕಾರ್ಯನ್ಮುಖವಾಗಿ ಕ್ರಮಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
