ರಾಮನಗರ: ರಾಜ್ಯದಲ್ಲಿ ನವೆಂಬರ್ ಕ್ರಾಂತಿ ವಿಚಾರಾವಗಿ ಮಾತನಾಡಿರುವ ಸಚಿವ ರಾಮಲಿಂಗಾರೆಡ್ಡಿ, ನವೆಂಬರ್ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ ಎಂದು ತಿಳಿಸಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ನವೆಂಬರ್ ಕ್ರಾಂತಿ, ಭ್ರಾಂತಿ ಯಾವುದೂ ಇಲ್ಲ, ಎಲ್ಲಾ ಶಾಂತವಾಗಿದೆ ಎಂದರು. ಕೆಲ ಸಚಿವರು, ಶಾಸಕರ ದೆಹಲಿ ಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಯಾರು ದೆಹಲಿಗೆ ಹೋಗಿದ್ದಾರೆ? ಯಾಕೆ ಹೊಗಿದ್ದಾರೆ ನನಗೆ ಗೊತ್ತಿಲ್ಲ. ದೆಹಲಿಯಲ್ಲಿ ಏನು ಚರ್ಚೆಯಾಗಿದೆ ಎಂಬುದೂ ಗೊತ್ತಿಲ್ಲ. ಹೆಚ್ಚಿನ ಮಾಹಿತಿ ಬೇಕಿದ್ದರೆ ಡಿಸಿಎಂ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಅವರನ್ನು ಕೇಳಿ ಎಂದರು.
ಸಚಿವರ ಸಭೆ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ನಾಲ್ಕು ಜನ ಊಟಕ್ಕೆಂದು ಸೇರಿದರೆ ಅದರ ಬಗ್ಗೆಯೂ ಮಾತನಾಡು ಆಗುತ್ತಾ? ಇದನ್ನು ಡಿನ್ನರ್ ಪಾಲಿಟಿಕ್ಸ್ ಎಂದು ಹೇಳಬೇಕಾ? ನನ್ನನ್ನು ಯಾರೂ ಕರೆದಿಲ್ಲ. ನಾನು ಯಾವ ಬಣದಲ್ಲೂ ಇಲ್ಲ ಎಂದರು.
ಸರ್ಕಾರದಲ್ಲಿ ಯಾರೂ ಅನಗತ್ಯ ಗೊಂದಲ ಮಾಡಿಕೊಳ್ಳಬಾರದು. ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
