ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ದುರಂತದಲ್ಲಿ 11 ಜನರು ಸಾವನ್ನಪ್ಪಿರುವ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಪ್ರಕರಣದ ಹೊಣೆಯನ್ನು ಸರ್ಕಾರ ವಹಿಸಿಕೊಳ್ಳುತ್ತದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಈ ದುರ್ಘಟನೆ ನಡೆಯಬಾರದಿತ್ತು. ಆದರೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನಿರೀಕ್ಷೆಗೂ ಮೀರಿ ಅಭಿಮಾನಿಗಳು ಬಂದಿದ್ದಾರೆ. ಇನ್ನೂ ಸರಿಯಾದ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಬಹುದಿತ್ತು. ನಮ್ಮ ಕಡೆಯಿಂದ ಲೋಪವಾಗಿದೆ ನಿಜ ಎಂದು ಹೇಳಿದರು.
ನಮ್ಮ ಲೋಪವಿದೆ ಒಪ್ಪಿಕೊಳ್ಳುತ್ತೇವೆ ಆದರೆ ಬಿಜೆಪಿಯವರು ಎಲ್ಲದಕ್ಕೂ ರಾಜಕೀಯ ಮಾಡೋದು ಸರಿಯಲ್ಲ, ನಿನ್ನೆಯ ಘಟನೆ ಬಗ್ಗೆ ಸಿಎಂ, ಡಿಸಿಎಂ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಪ್ಲಾನ್ ಮಾಡಿ ಕಾರ್ಯಕ್ರಮ ನಡೆಸಬಹುದಿತ್ತು. ಸಾರ್ವಜನಿಕರಿಗೂ ಸೂಚನೆ ನೀಡಬಹುದಿತ್ತು. ಆದರೆ ಕಾಲಾವಕಾಶ ಕಡಿಮೆ ಇತ್ತು. ದುರಂತದ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ. ಬೇರೆ ಸರ್ಕಾರಗಳ ರೀತಿ, ಅಥವಾ ಕೇಂದ್ರ ಸರ್ಕಾರದ ರೀತಿ ಜವಾಬ್ದಾರಿಯಿಂದ ನಾವು ನುಣುಚಿಕೊಳ್ಳಲ್ಲ ಎಂದು ಹೇಳಿದರು.