ಮೈಸೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತಕ್ಕೆ 11 ಜನರು ಸಾವನ್ನಪ್ಪಿರುವ ಘಟನೆ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಸರ್ಕಾರದ ಬೇಜವಾಬ್ದಾರಿಗೆ ಸಂಭ್ರಮಾಚರಣೆ ಕಾರ್ಯಕ್ರಮ ಶೋಕಾಚಾರಣೆಯಾಗಿದೆ. ಸಿಎಂ ಸಿದ್ದರಾಮಯ್ಯ ಕೇವಲ ಒರಟು ವ್ಯಕ್ತಿ ಮಾತ್ರವಲ್ಲ ಸಂವೇದನೆ ಇಲ್ಲದ ನಿರ್ಭಾವುಕ ವ್ಯಕ್ತಿ ಎಂಬುದು ಬುಧವಾರ ಮತ್ತೆ ಸಾಬೀತಾಗಿದೆ ಎಂದು ಕಿಡಿಕಾರಿದ್ದಾರೆ.
ಸಿಎಂ ತಮ್ಮ ಮೊಮ್ಮಗ, ಸಚಿವರು, ಅಧಿಕಾರಿಗಳು ತಮ್ಮ ಮಕ್ಕಳು ಆರ್ ಸಿಬಿ ತಂಡದೊಂದಿಗೆ ಫೋಟೋಗ್ರಾಫಿ, ಆಟೋಗ್ರಫಿ ತೆಗೆದುಕೊಳ್ಳಲೆಂದು ವಿಧಾನಸೌಧದ ಮುಂದೆ ಕಾರ್ಯಕ್ರಮ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕುಂಭಮೇಳದ ವೇಲೆ ಕಾಲ್ತುಳಿತ ಘಟನೆ ಬಗ್ಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಭದ್ರತೆಯ ಪಾಠ ಹೇಳಿದ್ದ ಸಚಿವರಾದ ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ ಈಗ ಎಲ್ಲಿ ಹೋಗಿದ್ದಾರೆ? ಆದಿತ್ಯನಾಥ್ ಅವರು ಕೋಟ್ಯಂತರ ಜನ ಕುಂಭಮೇಳಕ್ಕೆ ಆಗಮಿಸಿದರೂ ಸಮರ್ಥವಾಗಿ ನಿಭಾಯಿಸಿದ್ದಾರೆ. ಆದರೆ ರಾಜ್ಯ ಸರ್ಕಾರಕ್ಕೆ 60 ಸಾವಿರ ಜನರನ್ನು ನಿಭಾಯಿಸಲು ಸಾಧ್ಯವಗಿಲ್ಲ. ಕಾಂಗ್ರೆಸ್ ನವರು ಆರ್ ಸಿಬಿ ಗೆಲುವಿನಲ್ಲಿ ಪ್ರಚಾರಪಡೆಯಲು ಹೋಗಿ ಜನರನ್ನೇ ಬಲಿ ಕೊಟ್ಟಿದೆ ಎಂದು ಕಿಡಿಕಾರಿದ್ದಾರೆ.