ಮೈಸೂರು: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ಸರ್ಕಾರದ ಕ್ರಮ ಖಂಡಿಸಿ ಬಿಜೆಪಿ ನಾಯಕರು ಚಾಮುಂಡಿ ಚಲೋ ಆರಂಭಿಸಿದ್ದು, ಮೈಸೂರಿನಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಚಾಮುಂಡಿ ಚಲೋ ಹೋರಾಟದಲ್ಲಿ ಭಾಗಿಯಾದ ಮಾಜಿ ಸಂಸದ ಪ್ರತಾಪ್ ಸಿಂಹ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಸಿಎಂ ಸಿದ್ದರಾಮಯ್ಯ ತಾಲಿಬಾನ್ ಸರ್ಕಾರ ನಡೆಸುತ್ತಿದ್ದಾರೆ. ಅವರಿಗೆ ತಾಲಿಬಾನಿ ಮನಸ್ಥಿತಿ ಇರುವುದರಿಂದಲೇ ಇಂದು ರಾಜ್ಯಕ್ಕೆ ಈ ಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಯಿ ಭುವನೇಶ್ವರಿಗೆ ಅವಮಾನ ಮಾಡಿದವರನ್ನು ಅರಿಷಿಣ-ಕುಂಕುಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದವರನ್ನು ಇಂದು ದಸರಾ ಉದ್ಘಾಟನೆಗೆ ಆಯ್ಕೆ ಮಾಡಲಾಗಿದೆ. ಈ ಮೂಲಕ ನಾಡ ಅದಿದೇವತೆ ಚಾಮುಂಡಿ ತಾಯಿಗೂ ಅಪಮಾನ ಮಾಡುವ ಕೆಲಸ ನಡೆದಿದೆ. ಕನ್ನಡದ ಬಗ್ಗೆ, ಕನ್ನಡ ನಾಡು-ನುಡಿ ಬಗ್ಗೆ ಗೌರವಿಲ್ಲದ, ಭುವನೇಶ್ವರಿ ತಾಯಿಯನ್ನು ಅವಮಾನಿಸಿದವರನ್ನು ದಸರಾ ಉದ್ಘಾಟನೆಗೆ ಕರೆತರುತ್ತಿದ್ದಾರೆ. ಬಾನು ಮುಷ್ತಾಕ್ ಮಸೀದಿಯಲ್ಲಿರುವ ಮುಲ್ಲಾ ರೀತಿ ಮಾತನಾಡಿದ್ದಾರೆ, ಈವರೆಗೂ ರಾಜ್ಯದ ಜನರ ಕ್ಷಮೆ ಕೇಳಿಲ್ಲ. ಸಿಎಂ ಸಿದ್ದರಾಮಯ್ಯನವರು ಬಾನು ಮುಷ್ತಾಕ್ ಅವರಿಗೆ ಕರೆದು ಬುದ್ಧಿ ಹೇಳಿ, ಕ್ಷಮೆ ಕೇಳ್ವಂತೆ ಹೇಳಿದ್ದರೆ ನಾವಿಂದು ಪ್ರತಿಭಟನೆ ಮಾಡುವ ಸ್ಥಿತಿ ಬರುತ್ತಿರಲಿಲ್ಲ ಎಂದು ಕಿಡಿಕಾರಿದರು.
ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಬೇಕು ಎಂಬುದಿದ್ದರೆ ನೀವು ನಿಮ್ಮ ಮನೆಯ ಕಾರ್ಯಕ್ರಮಗಳಿಗೋ, ಮಗನ, ಮೊಮ್ಮಗನ ಮದುವೆಗೋ ಕರೆದು ತಾಂಬೂಲ ಕೊಡಿ. ಅದನ್ನು ಬಿಟ್ಟು ನಾಡ ಹಬ್ಬವಾದ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.