ಕಲಬುರಗಿ: ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಎಲ್ಲವೂ ಸರಿಯಾಗಿ ನಡೆಯಿತು. ಯುದ್ಧದ ವೇಳೆ ಎಲ್ಲರೂ ಒಂದಾಗಿ ಎಂದಾಗ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲರೂ ಒಂದಾಗಿದ್ದೆವು. ಆದರೆ, ಪ್ರಧಾನಿ ಮೋದಿಯವರೇ ಸರ್ವ ಪಕ್ಷ ಸಭೆಗೆ ಬರಲಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನಿಲುವು ಮತ್ತು ಮುಂದಿನ ಕ್ರಮ ಹಾಗೂ ಕೈಗೊಂಡ ನಿರ್ಧಾರಗಳ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ ಸರ್ವ ಪಕ್ಷ ಸಭೆಗೆ ಮೋದಿ ಅವರು ಪದೇ ಪದೇ ಗೈರು ಹಾಜರಾಗುತ್ತಾರೆ. ಇದು ಅವರು ತೋರುವ ಅಹಂಕಾರವಾಗಿದೆ ಎಂದು ಟೀಕಿಸಿದ್ದಾರೆ.
ತಾವೇ ಕರೆದ ಸರ್ವ ಪಕ್ಷ ಸಭೆಗೆ ಮೋದಿ ಅವರೇ ಬರಲಿಲ್ಲ. ಇದು ಅವರ ಅಹಂಕಾರ ತೋರಿಸುತ್ತದೆ. ಎಲ್ಲರೂ ಒಂದಾಗಿರುವ ಸಂದೇಶ ಕೊಟ್ಟರೆ ಒಳ್ಳೆಯದು, ಆದರೆ ಅವರೇ ಕರೆದ ಸಭೆಗೆ ಬರಲಿಲ್ಲ ಎಂದು ಹೇಳಿದ್ದಾರೆ.
ತೈಲ ಅಮದು ಸೇರಿದಂತೆ ಇರಾನ್ ದೇಶದೊಂದಿಗೆ ಭಾರತ ಒಳ್ಳೆಯ ಸಂಬಂಧ ಹೊಂದಿದೆ. ಇಡೀ ವಿಶ್ವಕ್ಕೆ ಶಾಂತಿ ಬೇಕಿದೆ. ಯಾರಿಗೂ ಯುದ್ಧ ಬೇಡವಾಗಿದೆ. ಜಗತ್ತಿನಲ್ಲಿ ಇಂದು ನಡೆಯುತ್ತಿರುವ ಯುದ್ಧ ಯಾರಿಗೂ ಬೇಡವಾಗಿದೆ. ಯುದ್ಧದಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ಶಾಂತಿ ಅಗತ್ಯವಿದೆ. ಜಗತ್ತು ಶಾಂತಿಯನ್ನು ಬಯಸುತ್ತಿದೆ. ಆದರೆ ಇರಾನ್ ಮೇಲೆ ಅಮೆರಿಕ ನಡೆಸಿದ ದಾಳಿಯನ್ನು ಒಪ್ಪುವಂತಹದ್ದಲ್ಲ. ಯಾವುದೇ ಸಮಸ್ಯೆ ಇದ್ದರೂ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಖರ್ಗೆ ಹೇಳಿದ್ದಾರೆ.