ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ಮಹಾನಿರೀಕ್ಷಕರು(ಡಿಜಿ ಐಜಿಪಿ)ಆಗಿ ಡಾ. ಎಂ.ಎ. ಸಲೀಂ ಅವರನ್ನು ನೇಮಿಸಿರುವ ಕ್ರಮ ಪ್ರಶ್ನಿಸಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಸುಪ್ರೀಂಕೋರ್ಟ್ ನಿಯಮ ಉಲ್ಲಂಘಿಸಿ ಸಲೀಂ ಅವರನ್ನು ಡಿಜಿ ಐಜಿಪಿಯನ್ನಾಗಿ ನೇಮಕ ಮಾಡಿ ಹೊರಡಿಸಿರುವ ಆದೇಶ ರದ್ದುಪಡಿಸಬೇಕೆಂದು ಕೋರಿ ವಕೀಲರಾದ ಸುಧಾ ಕಟ್ವಾ ಅರ್ಜಿ ಸಲ್ಲಿಸಿದ್ದಾರೆ.
ಪ್ರಕಾಶ್ ಸಿಂಗ್ ಪ್ರಕರಣ ಮತ್ತು ನಂತರದ ಆದೇಶಗಳಲ್ಲಿ ನಿಯಮಿತ ಡಿಜಿಪಿಯನ್ನು ಕೇಂದ್ರೀಯ ಲೋಕಸೇವಾ ಆಯೋಗದಿಂದ 3 ಹಿರಿಯ ಅಧಿಕಾರಿಗಳ ಪ್ಯಾನೆಲ್ ನಿಂದ ಆಯ್ಕೆ ಮಾಡಬೇಕು. ಮೆರಿಟ್, ಸೇವಾಹಿರಿತನ, ಅನುಭವದ ಆಧಾರದ ಮೇಲೆ ಇರಬೇಕು. ಅವರಿಗೆ ಕನಿಷ್ಠ ಎರಡು ವರ್ಷಗಳ ಅಧಿಕಾರವಧಿ ಇರಬೇಕು ಎಂದಿದೆ. ಅಲ್ಲದೆ ಕಾರ್ಯಕಾರಿ ಅಥವಾ ಪ್ರಭಾರ ಡಿಜಿಪಿಗಳ ನೇಮಕಾತಿ ಮಾಡಲು ಸುಪ್ರೀಂಕೋರ್ಟ್ ನಿಷೇಧಿಸಿದೆ.
ಸಲೀಂ ಅವರನ್ನು ನೇಮಕ ಮಾಡಿರುವ ಸಂಬಂಧ ಯು.ಪಿ.ಎಸ್.ಸಿ.ಯಿಂದ ಆರ್ಟಿಐ ಅಡಿ ಮಾಹಿತಿ ಪಡೆಯಲಾಗಿದ್ದು, ನೇಮಕ ಪ್ರಕ್ರಿಯೆಯಲ್ಲಿ ಲೋಪವಿದೆ ಎನ್ನುವ ಅಂಶ ಗೊತ್ತಾಗಿದೆ. ಹೀಗಾಗಿ ಪ್ರಭಾರ ನೇಮಕಾತಿ ತಕ್ಷಣವೇ ಹಿಂಪಡೆಯಬೇಕು. ಸುಪ್ರೀಂಕೋರ್ಟ್ ಮಾರ್ಗಸೂಚಿಗಳ ಪ್ರಕಾರ ನೇಮಕಾತಿ ಪ್ರಕ್ರಿಯೆ ನಡೆಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ. ಅರ್ಜಿ ವಿಚಾರಣೆಗೆ ಬರಬೇಕಿದೆ.