ಸಂಬಂಧಗಳು ಸ್ವಾರ್ಥದಿಂದ ಆವೃತವಾಗಿವೆ ಎಂದು ಅನ್ನಿಸುವ ಇಂದಿನ ದಿನಗಳಲ್ಲಿ, ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ತೋರಿಸುವಂತಹ ಅದ್ಭುತ ಘಟನೆಯೊಂದು ಮಹಾರಾಷ್ಟ್ರದ ಪಂಢರಪುರದಲ್ಲಿ ನಡೆದಿದೆ. ಒಬ್ಬ ಆಭರಣ ವ್ಯಾಪಾರಿಯ ಉದಾರತೆಯು ಎಲ್ಲರ ಮನ ಗೆದ್ದಿದ್ದು, ಮುಗ್ಧ ವೃದ್ಧ ದಂಪತಿ ಮತ್ತು ಆಭರಣ ಅಂಗಡಿಯ ಮಾಲೀಕರ ನಡುವಿನ ಈ ಸತ್ಯ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಮ್ಮ ಪತ್ನಿಗಾಗಿ ಚಿನ್ನದ ಮಂಗಳಸೂತ್ರ ಖರೀದಿಸಲು ಆಭರಣದ ಅಂಗಡಿಗೆ ಬಂದಿದ್ದ ವೃದ್ಧರೊಬ್ಬರು, ತಮ್ಮಲ್ಲಿನ ಸಂಪೂರ್ಣ ಉಳಿತಾಯವನ್ನು ಅಂಗಡಿ ಮಾಲೀಕರಿಗೆ ನೀಡಿದ್ದಾರೆ. ಆದರೆ, ಆ ಹಣ ಮಂಗಳಸೂತ್ರದ ಬೆಲೆಗೆ ಸಾಕಾಗಲಿಲ್ಲ. ಆಗ ಆಭರಣ ವ್ಯಾಪಾರಿ ಮಾಡಿದ ಕೆಲಸ ಎಲ್ಲರ ಹೃದಯವನ್ನು ತಟ್ಟಿದೆ.
ಮಂಗಳಸೂತ್ರ ಖರೀದಿಗೆ ಹಣ ಕಡಿಮೆ ಬಿದ್ದಾಗ………
ವೃದ್ಧ ಮಹಿಳೆಗೆ ಬಹಳ ದಿನಗಳಿಂದ ಚಿನ್ನದ ಮಂಗಳಸೂತ್ರ ಖರೀದಿಸುವ ಆಸೆಯಿತ್ತು. ಪತ್ನಿಯ ಈ ಆಸೆಯನ್ನು ಈಡೇರಿಸಲು, ವೃದ್ಧ ವ್ಯಕ್ತಿ ಪಂಢರಪುರಕ್ಕೆ ತೀರ್ಥಯಾತ್ರೆಗೆ ಬಂದಿದ್ದಾಗ ಆಭರಣ ಅಂಗಡಿಯೊಂದಕ್ಕೆ ಭೇಟಿ ನೀಡಿದ್ದರು. ಮಂಗಳಸೂತ್ರ ಖರೀದಿಸಲು ತಮ್ಮಲ್ಲಿದ್ದ ಎಲ್ಲ ಉಳಿತಾಯವನ್ನು ಅಂಗಡಿ ಮಾಲೀಕರಿಗೆ ನೀಡಿದರೂ, ಹಣ ಸಾಕಾಗಲಿಲ್ಲ.
ಅಂಗಡಿ ಮಾಲೀಕನ ಉದಾತ್ತ ಕಾರ್ಯಕ್ಕೆ ಮನಸೋತ ಜನ
ವೃದ್ಧ ದಂಪತಿಯ ಮುಗ್ಧತೆಯನ್ನು ಕಂಡ ಅಂಗಡಿ ಮಾಲೀಕರ ಹೃದಯ ಕರಗಿತು. ನಂತರ ಅವರು ಮಾಡಿದ ಕೆಲಸ ಎಲ್ಲರ ಮನಸ್ಸನ್ನು ಮುಟ್ಟಿತು. ಅಂಗಡಿ ಮಾಲೀಕರು ಮಹಿಳೆಯಿಂದ ತೆಗೆದುಕೊಂಡಿದ್ದ ಹಣವನ್ನು ಹಿಂದಿರುಗಿಸಿದರು. ಜೊತೆಗೆ, ಅವರಿಗೆ ಒಂದು ಚಿನ್ನದ ಮಂಗಳಸೂತ್ರವನ್ನೂ ಉಡುಗೊರೆಯಾಗಿ ನೀಡಿದರು.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಆಭರಣ ವ್ಯಾಪಾರಿ “ನೀವು ನಿಮ್ಮ ಹಣವನ್ನು ತೆಗೆದುಕೊಳ್ಳಿ. ನನಗೆ ನಿಮ್ಮ ಆಶೀರ್ವಾದ ಮಾತ್ರ ಸಾಕು. ಶ್ರೀ ಪಾಂಡುರಂಗನು ಎಲ್ಲರಿಗೂ ಒಳಿತನ್ನು ಮಾಡಲಿ” ಎಂದು ಹೇಳುವುದು ಕಾಣಿಸುತ್ತದೆ. ಅಂಗಡಿ ಮಾಲೀಕರ ಈ ಮಾತುಗಳನ್ನು ಕೇಳಿ ವೃದ್ಧ ಮಹಿಳೆ ಭಾವುಕರಾಗಿ, ಕಣ್ಣೀರು ಹಾಕಿದರು. ಅವರು ಆಭರಣ ವ್ಯಾಪಾರಿಗೆ ಮನಸಾರೆ ಆಶೀರ್ವದಿಸಿದರು.
‘ಹಣದಲ್ಲಿ ಮಾತ್ರವಲ್ಲ, ಹೃದಯದಲ್ಲೂ ಶ್ರೀಮಂತ’
ವೈರಲ್ ವಿಡಿಯೋ ನೋಡಿದ ಸಾಮಾಜಿಕ ಜಾಲತಾಣಗಳಲ್ಲಿ ಜನರು ಆಭರಣ ವ್ಯಾಪಾರಿಯ ಉದಾತ್ತ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ. “ಇಂತಹವರಿಂದಲೇ ಮಾನವೀಯತೆ ಇನ್ನೂ ಜೀವಂತವಾಗಿದೆ” ಎಂದು ಒಬ್ಬ ಬಳಕೆದಾರರು ಹೇಳಿದ್ದಾರೆ. “ಬಹಳ ಸುಂದರ, ನನ್ನ ಕಣ್ಣು ತುಂಬಿ ಬಂತು” ಎಂದು ಇನ್ನೊಬ್ಬರು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು, “ಈ ಆಭರಣ ವ್ಯಾಪಾರಿ ಹಣದಲ್ಲಿ ಶ್ರೀಮಂತ, ಆದರೆ ಹೃದಯದಲ್ಲಿ ಅದಕ್ಕಿಂತಲೂ ಶ್ರೀಮಂತ” ಎಂದು ಬರೆದುಕೊಂಡಿದ್ದಾರೆ.
पंढरपुर की तीर्थ यात्रा पर आए एक बुजुर्ग दंपत्ति ने आभूषण की दुकान से सोने का मंगलसूत्र खरीदा।
— Ocean Jain (@ocjain4) June 17, 2025
कीमत से अनजान पत्नी भोलेपन से अपनी बचत का छोटा हिस्सा पेश करते है।
दुकानदार ने जवाब दिया, "कृपया अपना पैसा रख लें। बस मुझे आशीर्वाद दें और भगवान पांडुरंग हम सभी को आशीर्वाद दें।"🙏💖 pic.twitter.com/iya68mjOQY