ಬೆಂಗಳೂರು: ಹಳೆ ಪಿಂಚಣಿ ವ್ಯವಸ್ಥೆ ಕುರಿತ ಅಧ್ಯಯನ ಸಮಿತಿ ಇನ್ನು 7 ದಿನಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಒಪಿಎಸ್ ಜಾರಿ ಆಗುವ ನಿರೀಕ್ಷೆ ಇದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದ್ದಾರೆ.
ಅಖಿಲ ಕರ್ನಾಟಕ ರಾಜ್ಯ ಎನ್ಪಿಎಸ್ ನೌಕರರ ಸಂಘ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಂಟಿಯಾಗಿ ಭಾನುವಾರ ಬೆಂಗಳೂರಿನ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಎನ್.ಪಿ.ಎಸ್. ಟು ಒಪಿಎಸ್ ಕಾರ್ಯಾಗಾರ, ಅಖಿಲ ಕರ್ನಾಟಕ ಎನ್ಪಿಎಸ್ ನೌಕರರ ಸಂಘದ ಮೊದಲ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ಹಳೆ ಪಿಂಚಣಿ ಜಾರಿಯಾಗುವ ನಿರೀಕ್ಷೆ ಇದ್ದು, ಒಂದು ವೇಳೆ ಜಾರಿಯಾಗದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಹೇಳಿದ್ದಾರೆ.
ಎನ್.ಪಿ.ಎಸ್. ಅಧ್ಯಯನ ಸಮಿತಿ ನೌಕರರ ಪರವಾಗಿ ವರದಿಯನ್ನು ಸರ್ಕಾರಕ್ಕೆ ನೀಡುವ ನಿರೀಕ್ಷೆ ಇದೆ. ಸಮಿತಿ ವರದಿ ನೀಡಿದ ನಂತರ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳ ಜೊತೆಗೆ ನಿರಂತರ ಸಂಪರ್ಕ ಸಾಧಿಸಿ ಮಾತುಕತೆ ನಡೆಸುವ ಮೂಲಕ ಒಪಿಎಸ್ ಜಾರಿಗೊಳಿಸುವ ಪ್ರಯತ್ನ ಮಾಡುತ್ತೇವೆ. ವರದಿ ನಂತರವೂ ಹಳೆ ಪಿಂಚಣಿ ಜಾರಿ ವಿಳಂಬವಾದಲ್ಲಿ ಹೋರಾಟ ಮಾಡಿ ಜಾರಿಗೆ ಶ್ರಮಿಸುತ್ತೇವೆ. ಇದಕ್ಕಾಗಿ ಪ್ರತಿ ಜಿಲ್ಲೆ, ತಾಲೂಕಿನಲ್ಲಿಯೂ ನೌಕರರು ಸಂಘಟಿತರಾಗಬೇಕು ಎಂದು ಹೇಳಿದ್ದಾರೆ.