ಬೆಂಗಳೂರು: ಖಾಸಗಿ ಟ್ಯಾಂಕರ್ ಗಳು ಸೇರಿದಂತೆ ಎಲ್ಲ ದೊಡ್ಡ ಪ್ರಮಾಣದ ನೀರು ಸರಬರಾಜುದಾರರು ಅಂತರ್ಜಲ ಹೊರ ತೆಗೆಯಲು ಸಂಬಂಧಿಸಿದ ಪ್ರಾಧಿಕಾರದಿಂದ ನಿರಾಪೇಕ್ಷಣಾ ಪತ್ರ(ಎನ್ಒಸಿ) ಪಡೆಯುವುದನ್ನು ಕಡ್ಡಾಯ ಮಾಡುವುದು ಸೇರಿದಂತೆ ಅಂತರ್ಜಲ ಬಳಕೆ ನಿಯಂತ್ರಿಸುವ ಉದ್ದೇಶದಿಂದ ಕಾನೂನು ತಿದ್ದುಪಡಿ ವಿಧೇಯಕಕ್ಕೆ ಮಂಗಳವಾರ ವಿಧಾನಸಭೆಯಲ್ಲಿ ಸರ್ವಾನುಮತದ ಅನುಮೋದನೆ ನೀಡಲಾಗಿದೆ./
ಕೇಂದ್ರ ಅಂತರ್ಜಲ ಪ್ರಾಧಿಕಾರ ಹೊರಡಿಸಿರುವ ಮಾರ್ಗಸೂಚಿ ಆಧರಿಸಿದ ಕರ್ನಾಟಕ ಅಂತರ್ಜಲ ಅಭಿವೃದ್ಧಿ ಮತ್ತು ನಿರ್ವಹಣೆಯ ನಿಯಂತ್ರಣ ತಿದ್ದುಪಡಿ ವಿಧೇಯಕ 2025ರ ಬಗ್ಗೆ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಅವರು ಸದನಕ್ಕೆ ವಿವರಣೆ ನೀಡಿದ್ದಾರೆ.
ಅಂತರ್ಜಲ ಬಳಕೆ ನಿಯಂತ್ರಿಸಲು ಅನುಮತಿ ಮತ್ತು ನಿರಾಪೇಕ್ಷಣಾ ಪತ್ರ ಕಡ್ಡಾಯ ಮಾಡಲಾಗಿದೆ. ಷರತ್ತು ಉಲ್ಲಂಘನೆಗೆ ಹಾಲಿ ಇದ್ದ ದಂಡದ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ವಿಧೇಯಕವನ್ನು ಸದಸ್ಯರು ಪಕ್ಷಾತೀತವಾಗಿ ಸ್ವಾಗತಿಸಿದ್ದು ಸರ್ವಾನುಮತದ ಅನುಮೋದನೆ ನೀಡಲಾಗಿದೆ.
ಗ್ರಾಮೀಣ ಮತ್ತು ನಗರ ಪ್ರದೇಶ ಎರಡರಲ್ಲಿಯೂ ಕುಡಿಯುವ ನೀರು, ಗೃಹ ಬಳಕೆ, ಗ್ರಾಮೀಣ ನೀರು ಸರಬರಾಜು ಯೋಜನೆಗಳು, ಕೃಷಿ ಚಟುವಟಿಕೆಗಳು, ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಲ್ಲಿ 5000 ಲೀಟರ್ ವರೆಗೆ ಕುಡಿಯುವ ನೀರು ಮತ್ತು ಗೃಹಬಳಕೆಗೆ ವಿನಾಯಿತಿ ನೀಡಲಾಗಿದೆ.
ದೊಡ್ಡ ಪ್ರಮಾಣದಲ್ಲಿ ನೀರು ಸರಬರಾಜು ಮಾಡುವ ಎಲ್ಲಾ ಖಾಸಗಿ ಟ್ಯಾಂಕರ್ ಗಳು ಅಂತರ್ಜಲ ಹೊರತೆಗೆಯಲು ನಿರಾಪೇಕ್ಷಣಾ ಪತ್ರ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದ್ದು, ಷರತ್ತು ಉಲ್ಲಂಘನೆಗೆ ಹಾಲಿ ಇದ್ದ 5000 ರೂ.ವರೆಗಿನ ದಂಡ ಶುಲ್ಕವನ್ನು 25,000 ರೂ. ವರೆಗೆ ಮುಚ್ಚಳ ಮಾಡಲಾಗಿದೆ ಎಂದು ಹೇಳಲಾಗಿದೆ.