ಪಿಂಚಣಿದಾರರೇ ಗಮನಿಸಿ: ಈ ತಪ್ಪೆಸಗಿದರೆ ಹಲವು ಸೌಲಭ್ಯಗಳಿಗೆ ಕೊಕ್ !

ಪಿಎಸ್‌ಯು (ಸಾರ್ವಜನಿಕ ವಲಯದ ಉದ್ದಿಮೆ) ನೌಕರರಿಗೆ ಕೇಂದ್ರ ಸರ್ಕಾರವು ಮಹತ್ವದ ಎಚ್ಚರಿಕೆ ನೀಡಿದೆ. ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ತಿದ್ದುಪಡಿ ನಿಯಮಗಳು, 2025 (CCS (Pension) Amendment Rules, 2025) ಅಡಿಯಲ್ಲಿ ಹೊಸ ಬದಲಾವಣೆಗಳನ್ನು ಘೋಷಿಸಿದ್ದು, ಯಾವುದೇ ನೌಕರರು ದುರ್ನಡತೆ ತೋರಿದರೆ ತಮ್ಮ ಪಿಂಚಣಿ ಸೌಲಭ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಈ ಬದಲಾವಣೆಗಳು ಮಾಸಿಕ ಪಿಂಚಣಿ, ಕುಟುಂಬ ಪಿಂಚಣಿ, ಭವಿಷ್ಯ ನಿಧಿ (ಪಿಎಫ್), ಗ್ರಾಚ್ಯುಟಿ, ತುಟ್ಟಿಭತ್ಯೆ ಮತ್ತು 7ನೇ ವೇತನ ಆಯೋಗದ (7th Pay Commission) ಸೌಲಭ್ಯಗಳ ಮೇಲೂ ಪರಿಣಾಮ ಬೀರಲಿವೆ.

ನಿಯಮ 37ರಲ್ಲಿ ಪ್ರಮುಖ ತಿದ್ದುಪಡಿ

ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯವು ಸಿಎಸ್‌ಎಸ್ (ಪಿಂಚಣಿ) ನಿಯಮಗಳು, 2021 ರ ನಿಯಮ 37ಕ್ಕೆ ತಿದ್ದುಪಡಿಗಳನ್ನು ಪ್ರಕಟಿಸಿದೆ. ತಿದ್ದುಪಡಿಗೊಂಡ ನಿಯಮ 37(29C) ರ ಪ್ರಕಾರ, ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ವಿಲೀನಗೊಂಡ ನಂತರ ಯಾವುದೇ ನೌಕರರು ಮಾಡುವ ದುರ್ನಡತೆಯಿಂದಾಗಿ ಸೇವೆಯಿಂದ ವಜಾಗೊಳಿಸಿದರೆ ಅಥವಾ ತೆಗೆದುಹಾಕಿದರೆ, ಸರ್ಕಾರಿ ಸೇವೆಯಲ್ಲಿ ಸಲ್ಲಿಸಿದ ಸೇವೆಯ ನಿವೃತ್ತಿ ಸೌಲಭ್ಯಗಳನ್ನೂ ಸಹ ಕಳೆದುಕೊಳ್ಳಬೇಕಾಗುತ್ತದೆ. ಅಂತಹ ವಜಾ ಅಥವಾ ತೆಗೆದುಹಾಕುವಿಕೆಯ ನಿರ್ಧಾರವು ಆ ಉದ್ದಿಮೆಗೆ ಸಂಬಂಧಿಸಿದ ಆಡಳಿತಾತ್ಮಕ ಸಚಿವಾಲಯದಿಂದ ಪರಿಶೀಲನೆಗೆ ಒಳಪಡುತ್ತದೆ.

ಹಳೆಯ ನಿಯಮ vs ಹೊಸ ನಿಯಮ

ಹಿಂದಿನ ನಿಯಮ 37(29C) ಅಡಿಯಲ್ಲಿ, ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ವಿಲೀನಗೊಂಡ ನಂತರ ನೌಕರರು ದುರ್ನಡತೆಗಾಗಿ ಸೇವೆಯಿಂದ ವಜಾಗೊಂಡರೂ, ಸರ್ಕಾರಿ ಸೇವೆಯಲ್ಲಿ ಗಳಿಸಿದ್ದ ನಿವೃತ್ತಿ ಸೌಲಭ್ಯಗಳನ್ನು ಉಳಿಸಿಕೊಳ್ಳಲು ಅವಕಾಶವಿತ್ತು. ಆದರೆ ಈಗಿನ ತಿದ್ದುಪಡಿಯ ಪ್ರಕಾರ, ದುರ್ನಡತೆಗಾಗಿ ಪಿಎಸ್‌ಯುಗಳಿಂದ ವಜಾಗೊಂಡರೆ, ಅವರು ತಮ್ಮ ಎಲ್ಲಾ ನಿವೃತ್ತಿ ಸೌಲಭ್ಯಗಳನ್ನು ಕಳೆದುಕೊಳ್ಳುತ್ತಾರೆ.

ಕಳೆದುಕೊಳ್ಳುವ ಸಾಧ್ಯತೆಯಿರುವ ಪ್ರಮುಖ ಸೌಲಭ್ಯಗಳು

ಕೇಂದ್ರ ಮತ್ತು ಪಿಎಸ್‌ಯು ನೌಕರರು ಕನಿಷ್ಠ 10 ವರ್ಷಗಳ ಸೇವೆಯ ನಂತರ ನಿವೃತ್ತಿ ಸೌಲಭ್ಯಗಳಿಗೆ ಅರ್ಹರಾಗುತ್ತಾರೆ. ಪ್ರಸ್ತುತ 7ನೇ ವೇತನ ಆಯೋಗದ ಅಡಿಯಲ್ಲಿ ಕನಿಷ್ಠ ಪಿಂಚಣಿ ತಿಂಗಳಿಗೆ 9,000 ರೂ. ಆಗಿದ್ದು, ಗರಿಷ್ಠ ಪಿಂಚಣಿ ತಿಂಗಳಿಗೆ 1,25,000 ರೂ. ವರೆಗೆ ಏರಬಹುದು. ಇಂತಹ ಹಲವು ಸೌಲಭ್ಯಗಳಿಗೆ ಹೊಸ ನಿಯಮಗಳು ಕತ್ತರಿ ಹಾಕುವ ಸಾಧ್ಯತೆ ಇದೆ:

  1. ಪಿಂಚಣಿಯ ಪರಿವರ್ತನೆ (Commutation of Pension): ಪಿಂಚಣಿಯ ಶೇ. 40ರಷ್ಟು ಭಾಗವನ್ನು ಒಂದೇ ಬಾರಿಗೆ ಪಡೆಯುವ ಸೌಲಭ್ಯ.
  2. ನಿವೃತ್ತಿ ಗ್ರಾಚ್ಯುಟಿ (Retirement Gratuity): ಕನಿಷ್ಠ 5 ವರ್ಷಗಳ ಅರ್ಹತಾ ಸೇವೆ ಸಲ್ಲಿಸಿದವರಿಗೆ ಲಭ್ಯವಿರುವ ಏಕರೂಪದ ಮೊತ್ತ.
  3. ಮರಣ ಗ್ರಾಚ್ಯುಟಿ (Death Gratuity): ಸರ್ಕಾರಿ ನೌಕರರು ಸೇವಾ ಅವಧಿಯಲ್ಲಿ ಮರಣ ಹೊಂದಿದರೆ ಕುಟುಂಬ ಅಥವಾ ನಾಮಿನಿಗೆ ಲಭ್ಯವಿರುವ ಸೌಲಭ್ಯ.
  4. ಸೇವಾ ಗ್ರಾಚ್ಯುಟಿ (Services Gratuity): 10 ವರ್ಷಗಳಿಗಿಂತ ಕಡಿಮೆ ಸೇವೆ ಸಲ್ಲಿಸಿದವರಿಗೆ ಪಿಂಚಣಿ ಬದಲಿಗೆ ಲಭ್ಯವಿರುವ ಮೊತ್ತ.
  5. ಠೇವಣಿ ಸಂಬಂಧಿತ ವಿಮಾ ಯೋಜನೆ (Deposit Linked Insurance Scheme): ಜಿಪಿಎಫ್ ನಿಯಮಗಳ ಅಡಿಯಲ್ಲಿ ಮರಣ ಹೊಂದಿದ ಚಂದಾದಾರರ ಖಾತೆಯಲ್ಲಿನ ಸರಾಸರಿ ಮೊತ್ತದೊಂದಿಗೆ ಹೆಚ್ಚುವರಿ ಮೊತ್ತ.
  6. ಅಂಶದಾಯಿ ಭವಿಷ್ಯ ನಿಧಿ (Contributory Provident Fund – CPF): ಉದ್ಯೋಗಿಗಳು ಮತ್ತು ಸರ್ಕಾರದಿಂದ ನೀಡುವ ಕೊಡುಗೆಯ ಮೂಲಕ ನಿವೃತ್ತಿ ಪ್ರಯೋಜನಗಳು.
  7. ರಜೆ ನಗದೀಕರಣ (Leave Encashment): ನಿವೃತ್ತಿಯ ಸಮಯದಲ್ಲಿ ಗಳಿಸಿದ ರಜೆಗಳನ್ನು ನಗದೀಕರಿಸುವ ಸೌಲಭ್ಯ (ಗರಿಷ್ಠ 300 ದಿನಗಳು).

ಈ ಹೊಸ ನಿಯಮಗಳು, ವಿಶೇಷವಾಗಿ 2003ರ ಡಿಸೆಂಬರ್ 31 ಅಥವಾ ಅದಕ್ಕೂ ಮೊದಲು ಸರ್ಕಾರಿ ಸೇವೆಗೆ ಸೇರಿದವರಿಗೆ ಅನ್ವಯಿಸುತ್ತವೆ. ಇದು ಸಾರ್ವಜನಿಕ ಸೇವೆಯಲ್ಲಿ ಶಿಸ್ತು ಮತ್ತು ಉತ್ತರದಾಯಿತ್ವವನ್ನು ಹೆಚ್ಚಿಸುವ ಸರ್ಕಾರದ ನಿರ್ಧಾರದ ಭಾಗವಾಗಿದೆ ಎಂದು ವಿಶ್ಲೇಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read