ಜಪಾನ್ನ ಮಾಂಗಾ ಕಲಾವಿದೆ, ಲೇಖಕಿ ಮತ್ತು ಭವಿಷ್ಯಗಾರ್ತಿ ರಿಯೋ ಟಟ್ಸುಕಿ ಅವರನ್ನು ‘ಹೊಸ ಬಾಬಾ ವಂಗಾ’ ಎಂದೇ ಕರೆಯಲಾಗುತ್ತಿದೆ. ಇವರು ಇತ್ತೀಚಿನ ವರ್ಷಗಳಲ್ಲಿ ನಿಜವಾಗಿವೆ ಎಂದು ವರದಿಯಾಗಿರುವ ಭವಿಷ್ಯವಾಣಿಗಳಿಂದ ಜಪಾನ್ಗೆ ಮತ್ತೊಂದು ಆತಂಕಕಾರಿ ಮುನ್ಸೂಚನೆ ನೀಡಿದ್ದಾರೆ. ಜುಲೈ 2025ರಲ್ಲಿ ಜಪಾನ್ಗೆ ಬೃಹತ್ ಮೆಗಾ ಸುನಾಮಿ ಅಪ್ಪಳಿಸಲಿದೆ ಎಂದು ಟಟ್ಸುಕಿ ಭವಿಷ್ಯ ನುಡಿದಿದ್ದಾರೆ. ಈ ಭವಿಷ್ಯವಾಣಿಯು ದೇಶದಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದ್ದು, ಹೆಚ್ಚಿನ ಪ್ರವಾಸಿಗರು ತಮ್ಮ ಬುಕಿಂಗ್ಗಳನ್ನು ರದ್ದುಗೊಳಿಸಿದ್ದಾರೆ. ಇದರಿಂದಾಗಿ ಜಪಾನ್ ಸರ್ಕಾರವು ತನ್ನ ನಾಗರಿಕರಿಗೆ, “ಜೋತಿಷ್ಯರ ಈ ಭಯಾನಕ ಭವಿಷ್ಯವಾಣಿಗಳಿಗೆ ಗಮನ ಕೊಡಬೇಡಿ” ಎಂದು ಔಪಚಾರಿಕವಾಗಿ ಮನವಿ ಮಾಡಿದೆ.
‘ಹೊಸ ಬಾಬಾ ವಂಗಾ’ ರಿಯೋ ಟಟ್ಸುಕಿ ಭವಿಷ್ಯವಾಣಿ: ಗಾರ್ಡಿಯನ್ ವರದಿಯ ಪ್ರಕಾರ, ರಿಯೋ ಟಟ್ಸುಕಿ ವರ್ಷಗಳ ಹಿಂದೆಯೇ ಈ ಭವಿಷ್ಯವಾಣಿಯನ್ನು ನುಡಿದಿದ್ದರು. ಕುತೂಹಲಕಾರಿಯಾಗಿ, ವಿಜ್ಞಾನಿಗಳು ಸಹ ಮುಂದಿನ ತಿಂಗಳು ಜುಲೈ 5ರಂದು ಜಪಾನ್ಗೆ ಭಾರಿ ವಿಪತ್ತು ಅಪ್ಪಳಿಸಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಇದು ರಿಯೋ ಟಟ್ಸುಕಿ ಅವರ ಭವಿಷ್ಯವಾಣಿಗೆ ಮತ್ತಷ್ಟು ವಿಶ್ವಾಸಾರ್ಹತೆಯನ್ನು ನೀಡಿದೆ. ಜಪಾನ್ ಸಮುದ್ರ ಮತ್ತು ಫಿಲಿಪೈನ್ಸ್ ನಡುವಿನ ಸಮುದ್ರದೊಳಗಿನ ಟೆಕ್ಟೋನಿಕ್ ಚಟುವಟಿಕೆಗಳಿಂದ ಉಂಟಾಗುವ ಬೃಹತ್ ಭೂಕಂಪದಿಂದ ಮೆಗಾ ಸುನಾಮಿ ಅಪ್ಪಳಿಸಲಿದೆ ಎಂದು ಹಲವರು ನಂಬಿದ್ದಾರೆ.
ಟಟ್ಸುಕಿ ಅವರ ಭವಿಷ್ಯವಾಣಿಗಳಿಗೆ ವೈಜ್ಞಾನಿಕ ಆಧಾರ ಇಲ್ಲದಿದ್ದರೂ, ಅವರ ಹಿಂದಿನ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ ಎಂದು ಅನೇಕರು ನಂಬುತ್ತಾರೆ. 2011ರಲ್ಲಿ ಜಪಾನ್ನಲ್ಲಿ ಸಂಭವಿಸಿದ ತೋಹೋಕು ಭೂಕಂಪ ಮತ್ತು ಸುನಾಮಿಯನ್ನು ಅವರು ನಿಖರವಾಗಿ ಊಹಿಸಿದ್ದರು ಎಂದು ಟಟ್ಸುಕಿ ಅವರಿಗೆ ಶ್ರೇಯಸ್ಸು ನೀಡಲಾಗಿದೆ.
‘ಹೊಸ ಬಾಬಾ ವಂಗಾ’ ಸುನಾಮಿ ಭವಿಷ್ಯದ ನಂತರ ಪ್ರವಾಸ ರದ್ದತಿ: ರಿಯೋ ಟಟ್ಸುಕಿ ಅವರ ಭೀಕರ ಭವಿಷ್ಯವಾಣಿಯ ಹಿನ್ನೆಲೆಯಲ್ಲಿ ಜಪಾನ್ಗೆ ಹೋಗಲು ಅನೇಕ ಪ್ರವಾಸಿಗರು ತಮ್ಮ ಟ್ರಾವೆಲ್ ಬುಕಿಂಗ್ಗಳನ್ನು ರದ್ದುಗೊಳಿಸಿದ್ದಾರೆ ಎಂದು ವರದಿಯಾಗಿದೆ. ವಿಮಾನ ಬುಕಿಂಗ್ಗಳು ಶೇಕಡಾ 83ರಷ್ಟು ಕುಸಿದಿವೆ. ಬ್ಲೂಮ್ಬರ್ಗ್ ಇಂಟೆಲಿಜೆನ್ಸ್ ವರದಿಯ ಪ್ರಕಾರ, ಏಪ್ರಿಲ್ ಅಂತ್ಯದಿಂದ ಜುಲೈ ಆರಂಭದ ನಡುವೆ ಹಾಂಗ್ ಕಾಂಗ್ನಿಂದ ಸರಾಸರಿ ಬುಕಿಂಗ್ಗಳು ವರ್ಷದಿಂದ ವರ್ಷಕ್ಕೆ 50% ರಷ್ಟು ಕಡಿಮೆಯಾಗಿವೆ, ಮತ್ತು ಜೂನ್ ಅಂತ್ಯದಿಂದ ಜುಲೈ ಆರಂಭದ ನಡುವೆ ಬುಕಿಂಗ್ಗಳು 83% ರಷ್ಟು ಕುಸಿದಿವೆ.
ಹಾಂಗ್ ಕಾಂಗ್ನ ಒಂದು ಟ್ರಾವೆಲ್ ಏಜೆನ್ಸಿ ಏಪ್ರಿಲ್-ಮೇ ರಜಾ ಅವಧಿಯಲ್ಲಿ ಜಪಾನ್ಗೆ ಬುಕಿಂಗ್ಗಳಲ್ಲಿ 50% ಕುಸಿತವನ್ನು ವರದಿ ಮಾಡಿದೆ, ಆದರೆ ಅನೇಕ ಪ್ರವಾಸಿಗರು ಈ ಭಯಾನಕ ಭವಿಷ್ಯವಾಣಿಯ ಹಿನ್ನೆಲೆಯಲ್ಲಿ ಬುಕಿಂಗ್ಗಳನ್ನು ರದ್ದುಗೊಳಿಸಿದ್ದಾರೆ ಅಥವಾ ತಮ್ಮ ಪ್ರವಾಸಗಳನ್ನು ಮುಂದೂಡಿದ್ದಾರೆ.
ಜಪಾನ್ ಸರ್ಕಾರದಿಂದ ಮನವಿ: ಟಟ್ಸುಕಿ ಅವರ ಭವಿಷ್ಯವಾಣಿಗಳಿಂದ ಉಂಟಾದ ಆತಂಕದಿಂದ ನಡುಗಿದ ಜಪಾನ್ ಸರ್ಕಾರವು ತನ್ನ ನಾಗರಿಕರಿಗೆ “ಸಂಪೂರ್ಣ ಆಧಾರರಹಿತ ಮತ್ತು ಯಾವುದೇ ವೈಜ್ಞಾನಿಕ ಆಧಾರವಿಲ್ಲದ” ಇಂತಹ ಭವಿಷ್ಯವಾಣಿಗಳಿಗೆ ಗಮನ ಕೊಡಬೇಡಿ ಎಂದು ಮನವಿ ಮಾಡಿದೆ.
ಸ್ಥಳೀಯ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ, ಮಿಯಾಗೆ ಪ್ರಿಫೆಕ್ಚರ್ ಗವರ್ನರ್ ಯೋಷಿಹಿರೋ ಮುರೈ, ಸಾಮಾಜಿಕ ಮಾಧ್ಯಮಗಳಲ್ಲಿನ ವದಂತಿಗಳಿಂದ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಿದರೆ ಅದು ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದ್ದರು . “ಚಿಂತಿಸುವ ಅಗತ್ಯವಿಲ್ಲ, ಏಕೆಂದರೆ ಜಪಾನಿಯರು ವಿದೇಶಕ್ಕೆ ಓಡಿಹೋಗುತ್ತಿಲ್ಲ. ಜನರು ವದಂತಿಗಳನ್ನು ನಿರ್ಲಕ್ಷಿಸಿ ಪ್ರಯಾಣಿಸುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಮುರೈ ಹೇಳಿದರು.
ಆದಾಗ್ಯೂ, ಟಟ್ಸುಕಿ ಅವರ ಭವಿಷ್ಯವಾಣಿಗಳನ್ನು ಮೀರಿ, ಜಪಾನಿನ ಅಧಿಕಾರಿಗಳು ಭೂಕಂಪದ ಅಪಾಯಗಳ ಬಗ್ಗೆ ಕಾಳಜಿ ವಹಿಸಿದ್ದಾರೆ. ಏಪ್ರಿಲ್ನಲ್ಲಿ ಸರ್ಕಾರಿ ಕಾರ್ಯಪಡೆಯೊಂದು ಎಚ್ಚರಿಕೆ ನೀಡಿದ್ದು, ಜಪಾನ್ನ ಪೆಸಿಫಿಕ್ ಕರಾವಳಿಯಲ್ಲಿ ಸಂಭವಿಸುವ ದೊಡ್ಡ ಭೂಕಂಪವು 2,98,000 ಜನರ ಸಾವಿಗೆ ಕಾರಣವಾಗಬಹುದು ಎಂದು ತಿಳಿಸಿದೆ.
ಪೆಸಿಫಿಕ್ ಸಾಗರದ ‘ರಿಂಗ್ ಆಫ್ ಫೈರ್’ನಲ್ಲಿ ಜಪಾನ್ನ ಸ್ಥಳವು ಅದನ್ನು ಭೂಕಂಪಗಳಿಗೆ ದುರ್ಬಲಗೊಳಿಸುತ್ತದೆ. ಆದರೆ ಪ್ರಸ್ತುತ ವೈಜ್ಞಾನಿಕ ತಿಳುವಳಿಕೆಯ ಆಧಾರದ ಮೇಲೆ ಭೂಕಂಪದ ಸಮಯ ಮತ್ತು ಸ್ಥಳವನ್ನು ನಿಖರವಾಗಿ ಊಹಿಸುವುದು ಅಸಾಧ್ಯ ಎಂದು ತಜ್ಞರು ಒತ್ತಿ ಹೇಳುತ್ತಾರೆ.