ಚಿಕ್ಕಬಳ್ಳಾಪುರ: ಪ್ರವಾಸಿಗರ ನೆಚ್ಚಿನ ತಾಣ ನಂದಿ ಗಿರಿಧಾಮಕ್ಕೆ ಐದು ದಿನಗಳ ಕಾಲ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮಾಹಿತಿ ನೀಡಿದೆ.
ನಂದಿಗಿರಿಧಾಮದಲ್ಲಿ ಜೂನ್ 19ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಜೂನ್ 16ರಿಂದ 5 ದಿನಗಳ ಕಾಲ ನಂದಿ ಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.
ಜೂನ್ 16ರ ಸಂಜೆ 6 ಗಂಟೆಯಿಂದ ಜೂನ್ 20ರ ನಸುಕಿನ ಜಾವ 5 ಗಂಟೆಯವರೆಗೂ ಪ್ರವಾಸಿಗರು, ಸಾರ್ವಜನಿಕರಿಗೆ ನಂದಿ ಬೆಟ್ಟಕ್ಕೆ ಪ್ರವೇಶವಿಲ್ಲ. ಈ ಹಿನ್ನೆಲೆಯಲ್ಲಿ ಈದಿನ ನಂದಿಬೆಟ್ಟಕ್ಕೆ ಬರದಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ರವೀಂದ್ರ ಪಿ.ಎಸ್ ಆದೇಶ ಹೊರಡಿಸಿದ್ದಾರೆ.
ನಂದಿ ಬೆಟ್ಟದ ಮೇಲಿನ ಅತಿಥಿ ಗೃಹಗಳ ಕಾರ್ಯ ಚಟುವಟಿಕೆಗೂ ನಿರ್ಬಂಧ ಹೇರಲಾಗಿದೆ. ಜೂನ್ 17ರಿಂದ 19ರವರೆಗೆ ನಂದಿ ಬೆಟ್ಟದ ಮೇಲೆ ವಸತಿ ಕೊಠಡಿಗಳ ಬುಕಿಂಗ್ ರದ್ದು ಮಾಡಲಾಗಿದೆ.