ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಕಬ್ಬು ಬೆಳೆಗಾರರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ನ್ನು ಅಡ್ಡಗಟ್ಟಿ ಬೆಂಕಿ ಹಚ್ಚಿ ಕೆಡವಿದ್ದ ರೈತರು ಇದೀಗ 20ಕ್ಕೂ ಹೆಚ್ಚು ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಧೋಳದ ಸಮೀರವಾಡೆ ಗೋಧಾವರಿ ಕಾರ್ಖಾನೆ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುತ್ತಿದ್ದರು ಕಾರ್ಖಾನೆ ಮಾಲೀಕರು ಮಾತುಕತೆಗೆ ಬಾರದೇ ಇರುವ ಕಾರಣಕ್ಕೆ ಗರಂ ಆಗಿರುವ ರೈತರು ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಗೆ ಬೆಂಕಿ ಹಚ್ಚಿದ್ದರು. ಕಾರ್ಖಾನೆಗೆ ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ನನ್ನು ರಸ್ತೆ ಮಧ್ಯೆಯೇ ತಡೆದ ಕಬ್ಬು ಬೆಳೆಗಾರರು, ಟ್ರ್ಯಾಕ್ಟರ್ ಗೆ ಬೆಂಕಿ ಹಚ್ಚಿ ಟ್ರ್ಯಾಕ್ಟರ್ ನ್ನು ಉರುಳಿಸಿದ್ದರು. ಬಳಿಕ ಸಮೀರವಾಡೆ ಗೋದಾವರಿ ಕಾರ್ಖಾನೆಗೆ ಮುತ್ತಿಗೆ ಹಾಕಲು ಬೈಕ್, ವಾಹನಗಳಲ್ಲಿ ತೆರಳಿದ ರೈತರು ಅಲ್ಲಿದ್ದ ಕಬ್ಬಿನ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.
ಕಾರ್ಖಾನೆಯ ಆವರಣದಲ್ಲಿ ನಿಲ್ಲಿಸಿಇದ್ದ ಕಬ್ಬು ತುಂಬಿದ್ದ 20ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳಿಗೆ ರೈತರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಬ್ಬಿನ ಲೋಡ್ ಗಳು ರೈತರ ಆಕ್ರೋಶದ ಬೆಂಕಿಗೆ ಧಗ ಧಗನೆ ಹೊತ್ತಿ ಉರಿದಿದೆ. ಘಟನಾ ಸ್ಥಳಕ್ಕೆ ಧಾವಿಸಿರುವ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
ಟನ್ ಕಬ್ಬಿಗೆ 3500 ರೂಪಾಯಿ ನಿಗದಿ ಮಾಡಲೇಬೇಕು ಎಂದು ಆಗ್ರಹಿಸಿ ರೈತರು ಮುಧೋಳದಲ್ಲಿ ಹೋರಾಟ ಮುಂದುವರೆಸಿದ್ದು, ರೈತರ ಪ್ರತಿಭಟನೆ ಕ್ಷಣ ಕ್ಷಣಕ್ಕೂ ತೀವ್ರಗೊಳ್ಳುತ್ತಿದೆ. ರೈತರು ಶಾಂತಿ ಕಾಪಾಡಬೇಕು. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಕಾನೂನು ಕೈಗೆತ್ತಿಕೊಳ್ಳದಂತೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಮನವಿ ಮಾಡಿದ್ದಾರೆ.
