ಚಿತ್ರದುರ್ಗ : ಸೊಳ್ಳೆ ಚಿಕ್ಕದು, ಕಾಟ ದೊಡ್ಡದು. ಡೆಂಗ್ಯೂ ಜ್ವರ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಕಾಶೀ ಹೇಳಿದರು. ನಗರದ ವಾಸವಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಸೊಳ್ಳೆಗಳಿಂದ ಹರಡುವ ರೋಗಗಳ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈಡೀಸ್ ಈಜಿಪ್ಟಿ ಎಂಬ ಸೊಳ್ಳೆ ಶುದ್ಧವಾದ ನೀರಲ್ಲಿ ಬೆಳೆದು ಹಗಲು ಹೊತ್ತು ಮನುಷ್ಯರನ್ನ ಕಚ್ಚುವುದರಿಂದ ಡೆಂಗ್ಯೂ ಜ್ವರ ಬರುತ್ತವೆ. ಸೊಳ್ಳೆ ಉತ್ಪತ್ತಿ ತಾಣಗಳಾದ ಮನೆಯಲ್ಲಿನ ತೊಟ್ಟಿಗಳು, ಡ್ರಮ್ಗಳು ಹಾಗೂ ಮನೆಯ ಹೊರಗಡೆ ತೆಂಗಿನ ಚಿಪ್ಪುಗಳು, ಕೋಳಿ ಮೊಟ್ಟೆ ಚಿಪ್ಪುಗಳು, ಒಡೆದ ಬಾಟಲಿಗಳಲ್ಲಿ ಮಳೆಗಾಲವಾದ್ದರಿಂದ ಶುದ್ಧವಾದ ನೀರು ಸಂಗ್ರಹ ವಾಗುವ ಸಾಧ್ಯತೆ ಇದ್ದು, ಇಂತಹ ನೀರಿನಲ್ಲಿ ಸೊಳ್ಳೆ ಮೊಟ್ಟೆ ಇಡುತ್ತವೆ. ಒಳ್ಳೆ ಸಂತತಿ ನಾಶ ಮಾಡಲು ನಿರುಪಯುಕ್ತ ವಸ್ತುಗಳನ್ನು ದೂರ ವಿಲೇವಾರಿ ಮಾಡಬೇಕು. ಮನೆಯಲ್ಲಿನ ನೀರಿನ ತಾಣಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ ಒಣಗಿಸಿ ಸುಣ್ಣ ಬಳಿದು ನೀರು ಶೇಖರಿಸಿ ಭದ್ರವಾಗಿ ಮುಚ್ಚಡಬೇಕು ಎಂದರು.
ಶಾಲೆಗೆ ಬರುವಾಗ ಮಕ್ಕಳು ತುಂಬು ತೋಳಿನ ಬಟ್ಟೆಗಳನ್ನು ಧರಿಸಬೇಕೆಂದರು. ಜಿಲ್ಲೆಯಲ್ಲಿ ಕಳೆದ ವರ್ಷ ಜನವರಿ 2024 ರಿಂದ ಮೇ ತಿಂಗಳ 2024ರ ವರೆಗೆ ಒಟ್ಟು 210 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ ಚಿತ್ರದುರ್ಗ ನಗರದಲ್ಲಿ 68 ವರದಿಯಾಗಿದ್ದು, 2025 ಜನವರಿಯಿಂದ ಮೇ 2025ರ ಅವಧಿಯಲ್ಲಿ ಒಟ್ಟು ಜಿಲ್ಲೆಯಲ್ಲಿ 55 ಡೆಂಗ್ಯೂ ಪ್ರಕರಣಗಳು ಅದರಲ್ಲಿ ಚಿತ್ರದುರ್ಗ ನಗರದಲ್ಲೇ 18 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಇಳಿಮುಖ ಕಂಡಿದ್ದು, ಆದರೂ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದರ ಮುಖಾಂತರ ರೋಗ ಹರಡದಂತೆ ಸರ್ವರೂ ಶ್ರಮಿಸಬೇಕು ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ ಮಾತನಾಡಿ, “ಸೊಳ್ಳೆ ಚಿಕ್ಕದು. ಕಾಟ ದೊಡ್ಡದು” “ನೀರಿನಲ್ಲಿನ ಹುಳಗಳು ಸೊಳ್ಳೆ ಮರಿಗಳ” “ಯಾವುದೇ ಜ್ವರ ಇರಲಿ ರಕ್ತಪರೀಕ್ಷೆ ಮಾಡಿಸಿ” ಎಂದು ವಿದ್ಯಾರ್ಥಿಗಳಿಂದ ಘೋಷಣೆಗಳನ್ನು ಕೂಗಿಸಿದರು. ಈ ವೇಳೆ ಈಡೀಸ್ ಲಾರ್ವ ಮತ್ತು ಲಾರ್ವಹಾರಿ ಮೀನುಗಳನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ವಾಸವಿ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ಗೋಪಾಲಕೃಷ್ಣ ಮಾತನಾಡಿ, ಶಾಲೆಯನ್ನು ಸದಾ ಸೊಳ್ಳೆಮುಕ್ತ ಲಾರ್ವ ಮುಕ್ತ ಮಾಡುತ್ತೇವೆ ಎಂದರು. ಮುಖ್ಯ ಶಿಕ್ಷಕಿ ಕೆ.ಆರ್.ರಾಧಾಮಣಿ ಮಾತನಾಡಿ, ರೋಗ ಬಂದ ಮೇಲೆ ಅನುಭವಿಸುವುದಕ್ಕಿಂತ ರೋಗ ಬಾರದಂತೆ ತಡೆಯುವುದು ಒಳ್ಳೆಯದು ಎಂದರು. ಕಾರ್ಯಕ್ರಮದಲ್ಲಿ ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಸತ್ಯನಾರಾಯಣಶೆಟ್ಟಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀನಿವಾಸ ಮಳಲಿ, ನಾಗರಾಜು, ಗುರುಮೂರ್ತಿ, ನಿತಿನ್ ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.