ಬೆಂಗಳೂರು: ರಾಜ್ಯದಲ್ಲಿ ಪ್ರಸಕ್ತ ವರ್ಷ 37 ಲಕ್ಷ ರೈತರಿಗೆ 28,000 ಕೋಟಿ ರೂ. ಕೃಷಿ ಸಾಲ ವಿತರಣೆಯ ಗುರಿ ನಿಗದಿಪಡಿಸಲಾಗಿದೆ. ಈ ಗುರಿ ಸಾಧನೆಗಾಗಿ ನಬಾರ್ಡ್ ಕೇಳುತ್ತಿರುವ ಹೆಚ್ಚುವರಿ ಬಡ್ಡಿ ಹಣವನ್ನು ರಾಜ್ಯ ಸರ್ಕಾರದಿಂದ ಭರಿಸುವಂತೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿ ರಜನೀಶ್ ಅವರಿಗೆ ದಿನೇಶ್ ಗೂಳಿಗೌಡ ಅವರು ಪತ್ರ ಬರೆದು ಮನವಿ ಮಾಡಿದ್ದಾರೆ.
2025- 26 ನೇ ಸಾಲಿನಲ್ಲಿ 36.31 ಲಕ್ಷ ರೈತರಿಗೆ 25,925.80 ಕೋಟಿ ರೂ. ಅಲ್ಪಾವಧಿ ಕೃಷಿ ಸಾಲ, 69 ಸಾವಿರ ರೈತರಿಗೆ 2,074.20 ಕೋಟಿ ಮಧ್ಯಮಾವಧಿ/ ದೀರ್ಘಾವಧಿ ಕೃಷಿ ಸಾಲ ಸೇರಿ ಒಟ್ಟು 37 ಲಕ್ಷ ರೈತರಿಗೆ 28,000 ಕೋಟಿ ರೂ ಕೃಷಿ ಸಾಲ ವಿತರಿಸುವ ಗುರಿ ನಿಗದಿಪಡಿಸಲಾಗಿದೆ ಎಂದು ಹೇಳಿದ್ದಾರೆ.
ಕಳೆದ ಸಾಲಿನಲ್ಲಿ ನಬಾರ್ಡ್ ಶೇಕಡ 4ರ ಬಡ್ಡಿ ದರದಲ್ಲಿ 5450 ಕೋಟಿ ರೂ. ಸಾಲವನ್ನು ರಾಜ್ಯ ಅಪೆಕ್ಸ್ ಬ್ಯಾಂಕ್ ಗೆ ನೀಡಿದ್ದು, ಈ ಬಾರಿ ಶೇ. 4ರ ಬಡ್ಡಿ ದರದಲ್ಲಿ ಅಪೆಕ್ಸ್ ಬ್ಯಾಂಕ್ ಗೆ ನೀಡುವ ಸಾಲದ ಪ್ರಮಾಣ 2700 ಕೋಟಿ ರೂ.ಗೆ ಸೀಮಿತಗೊಳಿಸಿದೆ.
ಶೇಕಡ 4ರ ಬಡ್ಡಿದರದ 2700 ಕೋಟಿ ರೂ. ಸಾಲದ ಹೊರತಾಗಿಯೂ ರಾಜ್ಯಕ್ಕೆ ಅಗತ್ಯವಿರುವಷ್ಟು ಹೆಚ್ಚುವರಿ ಸಾಲ ನೀಡಲು ನಬಾರ್ಡ್ ಸಿದ್ಧವಿದ್ದರೂ ಅದಕ್ಕೆ ಶೇಕಡ 8.25 ರಷ್ಟು ಬಡ್ಡಿಯನ್ನು ನೀಡಬೇಕು ಎಂದು ಹೇಳುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಅಪೆಕ್ಸ್ ಬ್ಯಾಂಕ್ ಪರವಾಗಿ ನಬಾರ್ಡ್ ಗೆ 4.25ರಷ್ಟು ಹೆಚ್ಚುವರಿ ಬಡ್ಡಿ ಹಣ ತುಂಬಿಸಿ ಬ್ಯಾಂಕಿಗೆ ಅಗತ್ಯವಿರುವ ಸಾಲ ಪಡೆಯಲು ಅನುಕೂಲ ಮಾಡಿಕೊಡಬೇಕು ಎಂದು ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ.