ಬೆಂಗಳೂರು: ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡುತ್ತಿದ್ದ ಆರೋಪದ ಮೇಲೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ತುರ್ತು ಚಿಕಿತ್ಸೆ ವೈದ್ಯಾಧಿಕಾರಿ ಡಾ. ಕೆ.ಎನ್. ಶಂಕರ್ ಅವರನ್ನು ಅಮಾನತುಗೊಳಿಸಿ ವೈದ್ಯಕೀಯ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಸಂಸ್ಥೆಯ ನಿರ್ದೇಶಕರು ವೈದ್ಯಕೀಯ ಶಿಕ್ಷಣ ಇಲಾಖೆಗೆ ನೀಡಿದ ವರದಿಯಲ್ಲಿ ತುರ್ತು ಚಿಕಿತ್ಸಾ ವೈದಾಧಿಕಾರಿ ಡಾ.ಕೆ.ಎನ್. ಶಂಕರ್ ಅವರು ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡಿರುವ ಹಾಗೂ ಭ್ರಷ್ಟಾಚಾರ ಎಸಗುತ್ತಿರುವ ಬಗ್ಗೆ ತಿಳಿಸಿದ್ದಾರೆ.
ಬೋಧಕೇತರ ಗ್ರೂಪ್ ಎ ಹುದ್ದೆಗಳ ಸಂಬಂಧ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರೇ ಸಕ್ಸಮ ಪ್ರಾಧಿಕಾರವಾಗಿರುತ್ತಾರೆ. ಹೀಗಾಗಿ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ವರದಿ ನೀಡಿದ್ದರು. ಡಾ. ಶಂಕರ್ ಅವರು ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಕರ್ನಾಟಕ ನಾಗರೀಕ ಸೇವಾ ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ ನಿಯಮಗಳು ಹಾಗೂ ಸಂಸ್ಥೆಯ ಬೈಲಾದ ನಿಯಮಕಾತಿ ನಿಯಮಗಳ ಅನ್ವಯ ಅಧಿಕಾರ ಚಲಾಯಿಸಿ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.