ರಾಯಚೂರು: ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಹಿನ್ನೆಲೆಯಲ್ಲಿ ಮಂತ್ರಾಲಯದ ಗುರು ರಾಯರ ಮಠದಲ್ಲಿ ಇಂದು ಮಧ್ಯಾರಾಧನೆ ನಡೆಯುತ್ತಿದೆ. ಗುರು ರಾಘವೇಂದ್ರ ಸ್ವಾಮಿಗಳು ಸಶರೀರವಾಗಿ ವೃಂದಾವನಸ್ಥರಾಗಿ ಇಂದಿಗೆ 354 ವರ್ಷಗಳು. ಈ ಹಿನ್ನೆಲೆಯಲ್ಲಿ ಮಂತ್ರಾಲಯದ ಗುರು ರಾಯರ ಮಠದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.
ರಾಯರ ಮೂಲ ವೃಂದಾವನಕ್ಕೆ ಮಠದ ಶ್ರೀಗಳಾದ ಸುಬುಧೇಂದ್ರ ತೀರ್ಥ ಸ್ವಾಮಿಜಿಗಳಿಂದ ವಿಶೇಷ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಸ್ವರ್ಣ ಕವಚದ ಮೂಲಕ ರಾಯರ ವೃಂದಾವನಕ್ಕೆ ವಿಶೇಷ ಅಲಂಕಾರ ಮಾಡಲಾಗಿದೆ.
ಮಂತ್ರಾಲಯದಲ್ಲಿ ಆಗಸ್ಟ್ 8ರಿಂದ ಗುರು ರಾಯರ 354ನೇ ಆರಾಧನಾ ಮಹೋತ್ಸವ ನಡೆಯುತ್ತಿದ್ದು, ಇಂದು ಮಧ್ಯಾರಾಧನೆ ಮಹತ್ವದ ಘಟ್ಟವಾಗಿದೆ. ಮಠದಲ್ಲಿ ಸಡಗರ ಸಂಭ್ರಮದಿಂದ ವಿಶೇಷ ಧಾರ್ಮಿಕ ಕಾರ್ಯಕ್ರಗಳನ್ನು ನೆರವೇರಿಸಲಾಗುತ್ತಿದೆ. ಈ ದಿನ ರಾಯರ ವಿಶೇಷ ಅನುಗ್ರಹ ದೊರೆಯಲಿದೆ ಎಂಬ ಪ್ರತೀತಿಯಿದೆ. ಇಂದು ಶ್ರೀಮಠದಲ್ಲಿ ಗಜ ರಥೋತ್ಸವ, ರಜತ ರಥೋತ್ಸವ ಹಾಗೂ ಚಿನ್ನದ ರಥೋತ್ಸವ ನಡೆಯಲಿದೆ. ನೂತನವಾಗಿ ನಿರ್ಮಿಸಲಾಗಿರುವ ಪರಿಮಳ ತೀರ್ಥ ಪುಷ್ಕರಣಿಯಲ್ಲಿ ರಾತ್ರಿ ತೆಪ್ಪೋತ್ಸವ ಜರುಗಲಿದೆ. ಮಧ್ಯಾರಾಧನೆ ಹಿನ್ನೆಲೆಯಲ್ಲಿ ದೇಶದ ಮೂಲೆ ಮೂಲೆಗಳಿಂದ ರಾಯರ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಮಠಕ್ಕೆ ಆಗಮಿಸುತ್ತಿದ್ದು, ರಾಯರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
ಇಂದಿನ ಮಧ್ಯಾರಾಧನೆ ಬಳಿಕ ಆಗಸ್ಟ್ 12ರಂದು ಉತ್ತರಾಧನೆ ಹಿನ್ನೆಲೆಯಲ್ಲಿ ಮಠದ ರಾಜಬೀದಿಯಲ್ಲಿ ಮಹಾರಥೋತ್ಸವ ನಡೆಯಲಿದೆ. ಉತ್ತರಾಧನೆಯೊಂದಿಗೆ ಆರಾಧನಾ ಮಹೋತ್ಸವ ಸಂಪನ್ನವಾಗಲಿದೆ.