ಮುಂಬೈ: ಮಹಾರಾಷ್ಟ್ರದಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ವರುಣಾರ್ಭಟಕ್ಕೆ ಮುಂಬೈನ ಕೆಇಎಂ ಆಸ್ಪತ್ರೆಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಮಹಾಮಳೆಗೆ ಕೆಇಎಂ ಆಸ್ಪತ್ರೆ ಬಳಿ ಪ್ರವಾಹದಂತೆ ನೀರು ಉಕ್ಕಿ ಹರಿಯುತ್ತಿದ್ದು, ಆಸ್ಪತ್ರೆಯ ಆವರಣ, ಆಸ್ಪತ್ರೆಯ ಒಳಭಾಗಕ್ಕೂ ನೀರು ನುಗ್ಗಿದೆ. ನೀರು ತುಂಬಿರುವ ಕೊಠಡಿಗಳಲ್ಲೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಂದೆಡೆ ರೋಗಿಗಳ ಸಂಬಂಧಿಕರು ಚೇರ್ ಗಳ ಮೇಲೆ ಕುಳಿತು ಆಶ್ರಯ ಪಡೆದಿದ್ದಾರೆ.
ಆಸ್ಪತ್ರೆಯ ತುಂಬೆಲ್ಲ ನೀರು ಹರಿಯುತ್ತಿದ್ದು, ರೋಗಿಗಳ ಪಾಡು ಹೇಳತೀರದು. ಆಸ್ಪತ್ರೆಯ ಸುತ್ತಮುತ್ತ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ.
ಇನ್ನು ಮುಂಬೈನ ದಾದರ್ ಪ್ರದೇಶ ಸಂಪೂರ್ಣ ನೀರಿನಿಂದ ತುಂಬಿದ್ದು, ನದಿಯಂತಾಗಿದೆ. ರಸ್ತೆಗಳು ಮಾಯವಾಗಿದ್ದು, ತುಂಬಿ ಹರಿಯುತ್ತಿರುವ ನೀರಿನ ಮಧ್ಯೆ ಕೆಟ್ಟು ನಿಂತಿರುವ ವಾಹನಗಳು, ಮತ್ತೊಂದೆಡೆ ಉಕ್ಕಿ ಹರಿಯುತ್ತಿರುವ ಚರಂಡಿ ನೀರು, ಮನೆಗಳು ಅಂಗಡಿ ಮುಗ್ಗಟ್ಟುಗಳು ಅರ್ಧದಷ್ಟು ಮುಳುಗಡೆಯಾಗಿವೆ. ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ.