ಸಲಿಂಗ ದಂಪತಿಗಳು ಕಾನೂನುಬದ್ಧವಾಗಿ ವಿವಾಹವಾಗಲು ಸಾಧ್ಯವಾಗದಿದ್ದರೂ, ಅವರು ‘ಕುಟುಂಬ’ವಾಗಿ ಬದುಕುವ ಹಕ್ಕನ್ನು ಹೊಂದಿದ್ದಾರೆ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಇತ್ತೀಚೆಗೆ ಕುಟುಂಬ ಸದಸ್ಯರಿಂದ ಬಲವಂತವಾಗಿ ಬಂಧಿಸಲ್ಪಟ್ಟಿದ್ದ 25 ವರ್ಷದ ಯುವತಿ ತನ್ನ ಸಂಗಾತಿಯೊಂದಿಗೆ ತೆರಳಲು ನ್ಯಾಯಾಲಯ ಅನುಮತಿ ನೀಡಿದೆ.
ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ ಯುವತಿಯೊಬ್ಬರು ತಮ್ಮ ಸಲಿಂಗಿ ಸಂಗಾತಿಯನ್ನು ವೆಲ್ಲೂರು ಜಿಲ್ಲೆಯ ಗುಡಿಯಾತ್ತಂನಲ್ಲಿರುವ ಕುಟುಂಬದ ಬಂಧನದಿಂದ ಬಿಡುಗಡೆಗೊಳಿಸುವಂತೆ ಕೋರಿ ಸಲ್ಲಿಸಿದ್ದ ‘ಹೇಬಿಯಸ್ ಕಾರ್ಪಸ್’ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಮತ್ತು ವಿ. ಲಕ್ಷ್ಮಿನಾರಾಯಣನ್ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಸುಪ್ರೀಂ ಕೋರ್ಟ್ನ ಸುಪ್ರಿಯೋ @ ಸುಪ್ರಿಯಾ ಚಕ್ರವರ್ತಿ Vs ಯೂನಿಯನ್ ಆಫ್ ಇಂಡಿಯಾ ಪ್ರಕರಣವು ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಿಲ್ಲದಿರಬಹುದು, ಆದರೆ ಸಲಿಂಗಿ ದಂಪತಿಗಳು ಕುಟುಂಬವನ್ನು ರಚಿಸಿಕೊಳ್ಳಬಹುದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
‘ಆಯ್ಕೆಯ ಕುಟುಂಬ’ಕ್ಕೆ ಮಾನ್ಯತೆ
“ಬಂಧಿತ ಯುವತಿ ತನ್ನ ಸಂಗಾತಿಯೊಂದಿಗೆ ತೆರಳಲು ಅರ್ಹಳಾಗಿದ್ದು, ಕುಟುಂಬ ಸದಸ್ಯರು ಆಕೆಯ ಇಚ್ಛೆಗೆ ವಿರುದ್ಧವಾಗಿ ಬಂಧಿಸಲು ಸಾಧ್ಯವಿಲ್ಲ” ಎಂದು ಪೀಠ ಸ್ಪಷ್ಟಪಡಿಸಿದೆ. ಆಕೆಯ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸದಂತೆ ಯುವತಿಯ ಕುಟುಂಬ ಸದಸ್ಯರಿಗೆ ನ್ಯಾಯಾಲಯ ನಿರ್ಬಂಧ ವಿಧಿಸಿದೆ. ಅಲ್ಲದೆ, ಅಗತ್ಯವಿದ್ದಾಗ ಯುವತಿ ಮತ್ತು ಆಕೆಯ ಸಂಗಾತಿಗೆ ಸೂಕ್ತ ರಕ್ಷಣೆ ನೀಡುವಂತೆ ಪೊಲೀಸ್ ಇಲಾಖೆಗೆ ‘ನಿರಂತರ ಮ್ಯಾಂಡಮಸ್ ರಿಟ್’ ಆದೇಶವನ್ನೂ ಹೊರಡಿಸಿದೆ.
ಪೊಲೀಸರ ವಿರುದ್ಧ ತೀವ್ರ ಅಸಮಾಧಾನ
ಅರ್ಜಿದಾರರು ಕಳುಹಿಸಿದ್ದ ‘SOS’ ಸಂದೇಶಗಳಿಗೆ ಸ್ಪಂದಿಸದ ಮತ್ತು ಯುವತಿಯನ್ನು ಆಕೆಯ ಪೋಷಕರೊಂದಿಗೆ ಹೋಗುವಂತೆ ಒತ್ತಾಯಿಸಿದ ವೆಲ್ಲೂರು ಜಿಲ್ಲೆಯ ಗುಡಿಯಾತ್ತಂ, ಪುದುಚೇರಿಯ ರೆಡ್ಡಿಯಾರ್ಪಾಳ್ಯಂ ಮತ್ತು ಕರ್ನಾಟಕದ ಜೀವನ್ ಬೀಮಾ ನಗರದ ಪೊಲೀಸರ ಕಾರ್ಯವೈಖರಿಗೆ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ದೂರು ದಾಖಲಿಸಿದರೂ ಗುಡಿಯಾತ್ತಂನ ಇನ್ಸ್ಪೆಕ್ಟರ್, ಡಿಎಸ್ಪಿ ಮತ್ತು ವೆಲ್ಲೂರು ಎಸ್ಪಿ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ನ್ಯಾಯಾಲಯ ನಿರಾಶೆ ವ್ಯಕ್ತಪಡಿಸಿದೆ. ‘ಹೇಬಿಯಸ್ ಕಾರ್ಪಸ್’ ಅರ್ಜಿ ಸಲ್ಲಿಸಿದ ನಂತರವಷ್ಟೇ ಪೊಲೀಸರು ಎಚ್ಚೆತ್ತಿದ್ದಾರೆ ಎಂದು ಪೀಠ ಹೇಳಿದೆ.
ಇಂತಹ ದೂರುಗಳು ಬಂದಾಗಲೆಲ್ಲಾ ಸರ್ಕಾರಿ ಅಧಿಕಾರಿಗಳು, ವಿಶೇಷವಾಗಿ ನ್ಯಾಯವ್ಯಾಪ್ತಿಯ ಪೊಲೀಸರು, ಸ್ಪಂದಿಸುವ ಕರ್ತವ್ಯವನ್ನು ಹೊಂದಿರುತ್ತಾರೆ ಎಂದು ನ್ಯಾಯಪೀಠ ಒತ್ತಿ ಹೇಳಿದೆ.
“ವಿವಾಹವೊಂದೇ ಕುಟುಂಬ ಸ್ಥಾಪಿಸಲು ಏಕೈಕ ಮಾರ್ಗವಲ್ಲ”
“ವಿವಾಹವು ಕುಟುಂಬವನ್ನು ಸ್ಥಾಪಿಸುವ ಏಕೈಕ ವಿಧಾನವಲ್ಲ. ‘ಆಯ್ಕೆಯ ಕುಟುಂಬ’ (chosen family) ಪರಿಕಲ್ಪನೆಯು ಈಗ ಎಲ್ಜಿಬಿಟಿಕ್ಯೂಐಎ+ ನ್ಯಾಯಶಾಸ್ತ್ರದಲ್ಲಿ ಸುಸ್ಥಾಪಿತ ಮತ್ತು ಅಂಗೀಕೃತವಾಗಿದೆ” ಎಂದು ಪೀಠ ಸ್ಪಷ್ಟಪಡಿಸಿದೆ. NALSA ಮತ್ತು ನವತೇಜ್ ಜೋಹರ್ ಪ್ರಕರಣಗಳನ್ನು ಉಲ್ಲೇಖಿಸಿ, ಲೈಂಗಿಕ ದೃಷ್ಟಿಕೋನವು ಭಾರತದ ಸಂವಿಧಾನದ ಆರ್ಟಿಕಲ್ 21 ರ ಅಡಿಯಲ್ಲಿ ಖಾತರಿಪಡಿಸಿದ ವೈಯಕ್ತಿಕ ಸ್ವಾತಂತ್ರ್ಯದ ವ್ಯಾಪ್ತಿಗೆ ಬರುತ್ತದೆ ಎಂದು ಸುಪ್ರೀಂ ಕೋರ್ಟ್ ಘೋಷಿಸಿದೆ ಎಂದು ಪೀಠ ವಿವರಿಸಿದೆ.
ಲೆಸ್ಬಿಯನ್ ಯುವತಿಯ ತಾಯಿ, ತನ್ನ ಮಗಳನ್ನು ಸಂಗಾತಿಯು “ದಿಕ್ಕುತಪ್ಪಿಸಿದ್ದಾಳೆ” ಮತ್ತು “ಮಾದಕ ವ್ಯಸನಿ”ಯನ್ನಾಗಿ ಮಾಡಿದ್ದಾಳೆ ಎಂದು ಹೇಳಿದ್ದನ್ನು ನ್ಯಾಯಾಲಯ ಪ್ರಸ್ತಾಪಿಸಿ, ಬಂಧಿತ ಯುವತಿ ಸಂಪೂರ್ಣವಾಗಿ ಸಾಮಾನ್ಯಳಾಗಿ ಕಾಣುತ್ತಿದ್ದಾಳೆ ಎಂದು ಹೇಳಿದೆ. ಸಮಾಜದ ಸಂಪ್ರದಾಯಬದ್ಧ ಮನೋಭಾವದಿಂದಾಗಿ, ಅರ್ಜಿದಾರರು ತಮ್ಮ ಸಂಬಂಧದ ನಿಜವಾದ ಸ್ವರೂಪವನ್ನು ಎಲ್ಲಿಯೂ ನಮೂದಿಸದೆ ‘ಆತ್ಮೀಯ ಸ್ನೇಹಿತೆ’ ಎಂದು ಕರೆದುಕೊಂಡಿರುವುದನ್ನು ನ್ಯಾಯಾಲಯ ಅರ್ಥಮಾಡಿಕೊಂಡಿದೆ.
ನಜ್ ಫೌಂಡೇಶನ್ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ನ ಸಲಿಂಗ ಸಂಬಂಧ ಅಪರಾಧವಲ್ಲ ಎಂಬ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದಾಗ ಲೈಲಾ ಸೇಥ್ ಬರೆದ ಹೃದಯ ವಿದ್ರಾವಕ ಪತ್ರವನ್ನು ನ್ಯಾಯಾಲಯ ನೆನಪಿಸಿಕೊಂಡಿದೆ. ನವತೇಜ್ ಸಿಂಗ್ ಜೋಹರ್ Vs ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಐತಿಹಾಸಿಕ ತೀರ್ಪಿನ ಮೂಲಕ ಸಲಿಂಗಕಾಮ ಅಪರಾಧವಲ್ಲ ಎಂದು ಘೋಷಿಸುವುದನ್ನು ನೋಡಲು ಲೈಲಾ ಸೇಥ್ ಜೀವಂತವಾಗಿರಲಿಲ್ಲ ಎಂದು ಪೀಠ ವಿಷಾದಿಸಿದೆ.
“ಬಂಧಿತ ಯುವತಿಯ ತಾಯಿ ಲೈಲಾ ಸೇಥ್ ಅಲ್ಲ. ನಾವು ಅವರ ಭಾವನೆಗಳನ್ನು ಮತ್ತು ಸ್ವಭಾವವನ್ನು ಅರ್ಥಮಾಡಿಕೊಳ್ಳಬಹುದು” ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ. ತಮ್ಮ ಮಗಳು ವಯಸ್ಕಳಾಗಿರುವುದರಿಂದ ತನ್ನದೇ ಆದ ಜೀವನವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಹೊಂದಿದ್ದಾಳೆ ಎಂದು ಅವರಿಗೆ ಮನವರಿಕೆ ಮಾಡಲು ವ್ಯರ್ಥ ಪ್ರಯತ್ನ ಮಾಡಿದ್ದೇವೆ ಎಂದು ನ್ಯಾಯಾಲಯ ಗಮನಿಸಿದೆ. ಈ ವಿಷಯದ ಬಗ್ಗೆ ಕಾನೂನು ಮತ್ತು ಪೂರ್ವನಿದರ್ಶನಗಳು ಸ್ಪಷ್ಟವಾಗಿವೆ ಎಂದು ಪೀಠ ತಿಳಿಸಿದೆ.