ರಾಮನಗರ: ಜೆಡಿಎಸ್ ಬಹುಮತದಿಂದ ಅಧಿಕಾರಕ್ಕೆ ಬಂದರೆ ಚನ್ನಪಟ್ಟಣ-ರಾಮನಗರವನ್ನು ಅವಳಿನಗರವನ್ನಾಗಿ ಮಾಡುವೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.
ಚನ್ನಪಟ್ಟಣದ ಕೋಡಂಬಳ್ಳಿ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಜೆಡಿಎಸ್ ಯವತ್ತೂ ಸ್ವಂತಬಲದಿಂದ ಅಧಿಕಾರಕ್ಕೆ ಬಂದಿಲ್ಲ. ನನಗೆ ನನ್ನ ಪಕ್ಷ 5 ವರ್ಷ ಸರ್ಕಾರ ರಚಿಸಬೇಕು ಎಂಬ ಛಲವಿದೆ. ಜೆಡಿಎಸ್ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದರೆ ಹುಬ್ಬಳ್ಳಿ-ಧಾರವಾಡ ರೀತಿ ಚನ್ನಪಟ್ಟಣ-ರಾಮನಗರವನ್ನು ಅವಳಿನಗರವನ್ನಾಗಿ ಮಾಡುವ ಗುರಿಯಿದೆ ಎಂದರು.
ನಾನು 14 ತಿಂಗಳು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ನಂತರ ನನ್ನನ್ನು ಅಧಿಕಾರದಿಂದ ಕೆಳಗಿಳಿಸಿದರು. ಆಗ ಹೆಚ್ ಡಿಕೆಯನ್ನೇ ಮುಗಿಸಿಬಿಟ್ವಿ ಅಂದುಕೊಂಡರು. ಆದರೆ ಈಗ ಪ್ರಧಾನಿ ಮೋದಿ ಸಂಪುಟದಲ್ಲಿ ಮಂತ್ರಿಯಾಗಿದ್ದೇನೆ. ನನ್ನ ಆರೋಗ್ಯವನ್ನೂ ಲೆಕ್ಕಿಸದೇ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.