ಬೆಂಗಳೂರು: ಗೊಂದಲಕ್ಕೀಡಾದ ಲೋಕಸೇವಾ ಆಯೋಗದ ಪರೀಕ್ಷಾ ವೇಳಾ ಪಟ್ಟಿಯನ್ನು ತಕ್ಷಣ ಬದಲಿಸುವಂತೆ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಅವರ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ ಕೆ.ಪಿ.ಎಸ್.ಸಿ. ಪರೀಕ್ಷಾ ದಿನಾಂಕವನ್ನು ಬದಲಿಸಿ ಶನಿವಾರ ಆದೇಶ ಹೊರಡಿಸಿದೆ.
ಕರ್ನಾಟಕ ಲೋಕಸೇವಾ ಆಯೋಗದಿಂದ ಹೊರಡಿಸಲಾಗಿದ್ದ ವಿವಿಧ ಲಾಖೆಗಳಲ್ಲಿನ NON HK ವೃಂದದ 227 ಗ್ರೂಪ್ ಬಿ ಹುದ್ದೆಗಳಿಗೆ ಆಗಸ್ಟ್ 11 ರಂದು ಹಾಗೂ HK ವೃಂದದ 50 ಗ್ರೂಪ್ ಬಿ ಹುದ್ದೆಗಳಿಗೆ 2024 ಆಗಸ್ಟ್ 25 ರಂದು ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಈ ಹಿಂದೆ ಆದೇಶಿಸಿತ್ತು.
ಇದೀಗ ರಾಜ್ಯ ಸರ್ಕಾರ ಲಿಖಿತ ಪರೀಕ್ಷೆ ಮುಂದೂಡಿ 2024 ಸೆಪ್ಟೆಂಬರ್ 14 ಮತ್ತು 15 ರಂದು ಹಾಗೂ ಅಕ್ಟೋಬರ್ 19 ಮತ್ತು 20 ರಂದು ನಡೆಸಲು ಆದೇಶಿಸಿದೆ.
ಮುಂದಿನ ತಿಂಗಳು ಆಗಸ್ಟ್ 25 ರಂದು ರಾಜ್ಯ ಲೋಕಸೇವಾ ಆಯೋಗವು ಕೆ.ಪಿ.ಎಸ್.ಸಿ. ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಪೂರ್ವಭಾವಿ ಪರೀಕ್ಷೆ ನಿಗದಿ ಮಾಡಿತ್ತು, ಆದರೆ, ಕೇಂದ್ರ ಸರ್ಕಾರದ ಬ್ಯಾಂಕಿಂಗ್ ಪರೀಕ್ಷೆಯೂ ಕೂಡ(ಐಬಿಪಿಎಸ್) ಅದೇ ದಿನ ನಿಗದಿಯಾಗಿತ್ತು, ಒಂದೇ ದಿನ ನಡೆಯುವ ಎರಡು ಪರೀಕ್ಷೆಗಳಿಂದ 5 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಗೊಂದಲಕ್ಕೀಡಾಗಿ ಅವಕಾಶಗಳಿಂದ ವಂಚಿತರಾಗಲಿದ್ದರು, ಪೂರ್ವಭಾವಿ ಪರೀಕ್ಷೆಯನ್ನು ತಕ್ಷಣ ಮುಂದೂಡಿ ಪರೀಕ್ಷಾ ದಿನಾಂಕವನ್ನು ಮರು ನಿಗದಿ ಮಾಡುವ ಮೂಲಕ ನಿರುದ್ಯೋಗಿ ಪದವೀಧರ ಅಭ್ಯರ್ಥಿಗಳ ಹಿತ ಕಾಪಾಡುವಂತೆ ಸಭಾಪತಿಗಳ ಮೂಲಕ ರಾಜ್ಯ ಸರ್ಕಾರವನ್ನು ಶುಕ್ರವಾರ ಅಧಿವೇಶನದ ಶೂನ್ಯ ವೇಳೆಯಲ್ಲಿ ಡಾ.ಧನಂಜಯ ಸರ್ಜಿ ಅವರು ವಿಷಯ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದು ಆಗ್ರಹಿಸಿದ್ದರು.
ಸರ್ಕಾರವು ದಿನಾಂಕ 11-08-2024ಕ್ಕೆ ನಿಗದಿಪಡಿಸಿದ್ದ ಪರೀಕ್ಷೆಯನ್ನು ಮುಂದೂಡಿದ್ದು, ಪದವೀಧರರ ಪರವಾಗಿ ತಮ್ಮ ಮನವಿಗೆ ಸ್ಪಂದಿಸಿದಕ್ಕೆ ಡಾ. ಧನಂಜಯ ಸರ್ಜಿ ಅವರು ರಾಜ್ಯ ಸರ್ಕಾರಕ್ಕೆ ಧನ್ಯವಾದವನ್ನು ಸಲ್ಲಿಸಿದ್ದಾರೆ.