alex Certify ‘ಇನ್ನು ಹೆಚ್ಚು ದಿನ ಕಾಯಲು ಸಾಧ್ಯವಿಲ್ಲ’; ರಾಜ್ಯಪಾಲ ಹುದ್ದೆ ನೀಡದಿದ್ದರೆ ಸುಪ್ರೀಂ ಕೋರ್ಟ್‌ಗೆ ಹೋಗುತ್ತೇನೆಂದು ಬಿಜೆಪಿಗೆ ಎಚ್ಚರಿಕೆ ನೀಡಿದ ಮಾಜಿ ಸಂಸದ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಇನ್ನು ಹೆಚ್ಚು ದಿನ ಕಾಯಲು ಸಾಧ್ಯವಿಲ್ಲ’; ರಾಜ್ಯಪಾಲ ಹುದ್ದೆ ನೀಡದಿದ್ದರೆ ಸುಪ್ರೀಂ ಕೋರ್ಟ್‌ಗೆ ಹೋಗುತ್ತೇನೆಂದು ಬಿಜೆಪಿಗೆ ಎಚ್ಚರಿಕೆ ನೀಡಿದ ಮಾಜಿ ಸಂಸದ…!

ಲೋಕಸಭೆಯ ಮಾಜಿ ಸಂಸದ ಹಾಗೂ ಶಿವಸೇನೆ ನಾಯಕ ಆನಂದರಾವ್ ಅಡ್ಸುಲ್ ಭಾರತೀಯ ಜನತಾ ಪಕ್ಷಕ್ಕೆ ಅಂತಿಮ ಅವಕಾಶ ನೀಡಿದ್ದು, 15 ದಿನಗಳಲ್ಲಿ ತಮ್ಮನ್ನು ರಾಜ್ಯಪಾಲರನ್ನಾಗಿ ಮಾಡದಿದ್ದರೆ ಮಾಜಿ ಸಂಸದೆ ನವನೀತ್ ರಾಣಾ ಅವರ ಜಾತಿ ಪ್ರಮಾಣಪತ್ರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ಗೆ ಹೋಗುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಅಮರಾವತಿಯಿಂದ ಎರಡು ಬಾರಿ ಸಂಸದರಾಗಿದ್ದ ಆನಂದರಾವ್ ಅಡ್ಸುಲ್ ಅವರ ಬದಲು 2024 ರ ಲೋಕಸಭಾ ಚುನಾವಣೆಯಲ್ಲಿ ನವನೀತ್ ರಾಣಾ ಅವರಿಗೆ ಟಿಕೆಟ್ ನೀಡಲಾಯಿತು. ಈ ವೇಳೆ ಆನಂದರಾವ್ ಅಡ್ಸುಲ್ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಸಮ್ಮುಖದಲ್ಲಿ ರಾಜ್ಯಪಾಲರ ಸ್ಥಾನದ ಭರವಸೆ ನೀಡಿದ್ದರಂತೆ. ಆದರೆ ಈಗ ಬಿಜೆಪಿ ತನ್ನ ಭರವಸೆಯನ್ನು ಉಳಿಸಿಕೊಳ್ಳಲು ವಿಫಲವಾಗಿದೆ ಎಂದು ಆನಂದರಾವ್ ಅಡ್ಸುಲ್ ಆರೋಪಿಸಿದ್ದಾರೆ.

“ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ನನ್ನನ್ನು ರಾಜ್ಯಪಾಲರನ್ನಾಗಿ ನೇಮಿಸುವುದಾಗಿ ಭರವಸೆ ನೀಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಭರವಸೆ ನೀಡಿದರು. ಆದರೆ ಯಾವುದೇ ಭರವಸೆ ಈಡೇರಿಲ್ಲ. ನಾನು ಶಾಶ್ವತವಾಗಿ ಕಾಯಲು ಸಾಧ್ಯವಿಲ್ಲ, ನಾನು ಇನ್ನೂ 15 ದಿನ ಕಾಯುತ್ತೇನೆ. ಅದರ ನಂತರ ನಾನು ಸುಪ್ರೀಂ ಕೋರ್ಟ್‌ಗೆ ಹೋಗುತ್ತೇನೆ ಮತ್ತು ನವನೀತ್ ರಾಣಾ ಅವರ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸುತ್ತೇನೆ ಎಂದು ಅಡ್ಸುಲ್ ಸುದ್ದಿಗಾರರಿಗೆ ತಿಳಿಸಿದರು.

ಮುಖ್ಯಮಂತ್ರಿ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ಫಡ್ನವೀಸ್ ಇಬ್ಬರೂ ಬಿಜೆಪಿಯ ಕೇಂದ್ರ ನಾಯಕತ್ವಕ್ಕೆ ಕಳುಹಿಸಲಾದ ಪತ್ರದಲ್ಲಿ ರಾಜ್ಯಪಾಲರಾಗಿ ತಮ್ಮ ಹೆಸರನ್ನು ಶಿಫಾರಸು ಮಾಡುವ ಪತ್ರಕ್ಕೆ ಸಹಿ ಹಾಕಿದ್ದಾರೆ ಆದರೆ ಕಡೆಗಣಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ವರ್ಷದ ಏಪ್ರಿಲ್‌ನಲ್ಲಿ ನವನೀತ್ ರಾಣಾ ಅವರ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸಿದ ಬಾಂಬೆ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿ ರಿಲೀಫ್ ನೀಡಿತ್ತು. ಈ ಮೂಲಕ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ದಾರಿ ಮಾಡಿಕೊಟ್ಟಿತು.

2019 ರ ಚುನಾವಣೆಯಲ್ಲಿ ಅಮರಾವತಿಯಿಂದ ಆನಂದರಾವ್ ಅಡ್ಸುಲ್ ವಿರುದ್ಧ ಎನ್‌ಸಿಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದ ನವನೀತ್ ರಾಣಾ 2024ರ ಚುನಾವಣೆಗೆ ಮುಂಚಿತವಾಗಿ ಬಿಜೆಪಿಗೆ ಸೇರ್ಪಡೆಗೊಂಡರು ಮತ್ತು ಮಹಾಯುತಿ ಅಭ್ಯರ್ಥಿಯಾಗಿ ಅಮರಾವತಿಯಲ್ಲಿ ಸ್ಪರ್ಧಿಸಿ ಸೋತರು.

ಆದರೆ ತಮಗೆ ರಾಜ್ಯಪಾಲ ಸ್ಥಾನ ಸಿಗುತ್ತದೆಂದು ಕಾದಿದ್ದ ಆನಂದರಾವ್ ಅಡ್ಸುಲ್ ಗೆ ಇದೀಗ 9 ರಾಜ್ಯಗಳಿಗೆ ರಾಷ್ಟ್ರಪತಿಗಳು ರಾಜ್ಯಪಾಲರನ್ನು ನೇಮಿಸಿದ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದನ್ನು ಕಂಡು ಸಿಟ್ಟಿಗೆದ್ದಿದ್ದಾರೆ. ನವನೀತ್ ರಾಣಾ ಅವರ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಲು ಉದ್ದೇಶಿಸಿರುವುದಾಗಿ ಎಚ್ಚರಿಸಿದ್ದಾರೆ.

2019 ರ ಚುನಾವಣೆಯಲ್ಲಿ ವಿಫಲವಾದ ನಂತರ, ಉದ್ಧವ್ ಠಾಕ್ರೆ ವಿರುದ್ಧ ಬಂಡಾಯದ ನಂತರ ಅಡ್ಸುಲ್ ಏಕನಾಥ್ ಶಿಂಧೆ ಬಣ ಸೇರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...