ಬೆಂಗಳೂರು: ಭೋವಿ ನಿಗಮದ ಹಗರಣದ ತನಿಖೆ ವೇಳೆ ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ವಕೀಲೆ ಜೀವಾಗೆ ಚಿತ್ರಹಿಂಸೆ ನೀಡಿದ್ದು, ವಿವಸ್ತ್ರಗೊಳಿಸಿ ಹಿಂಸಿಸಿ, ವಿಡಿಯೋ ಮಾಡಿ ಬಳಿಕ ಎಫ್ ಎಸ್ ಮೂಲಕ ಅದನ್ನು ಡಿಲಿಟ್ ಮಾಡಿರುವುದು ಎಸ್ಐಟಿ ತನಿಖೆಯಲ್ಲಿ ಬಯಲಾಗಿದೆ.
ವಕೀಲೆ ಜೀವಾ ಡಿವೈಎಸ್ ಪಿ ಕನಕಲಕ್ಷ್ಮಿ ತನ್ನನ್ನು ವಿಚಾರಣೆ ನೆಪದಲ್ಲಿ ಕರೆದು ಚಿತ್ರಹಿಂಸೆ ನೀಡಿದ್ದಾರೆ. ನನ್ನ ಆತ್ಮಹತ್ಯೆಗೆ ಡಿವೈಎಸ್ ಪಿ ಕನಕಲಕ್ಷ್ಮೀಯೇ ಕಾರಣ ಎಂದು 13 ಪುಟಗಳ ಡೆತ್ ನೋಟ್ ಬರೆದಿಟ್ಟು ವಕೀಲೆ ಜೀವಾ 2024ರ ನ.22ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆಗೆ ಸಿಬಿಐ ಅಧಿಕಾರಿಗಳು ಒಳಗೊಂಡಂತೆ ಎಸ್ಐಟಿ ರಚನೆ ಮಾಡಿ ಹೈಕೋರ್ಟ್ ತನಿಖೆಗೆ ಆದೇಶಿಸಿತ್ತು. ಮಾ.11ರಂದು ಡಿವೈಎಸ್ ಪಿ ಕನಕಲಕ್ಷ್ಮೀಯನ್ನು ಬಂಧಿಸಲಾಗಿತ್ತು. ಇದೀಗ ತನಿಖೆ ಪೂರ್ಣಗೊಳಿಸಿರುವ ಎಸ್ಐಟಿ 2,300 ಪುಟಗಳ ತನಿಖಾ ವರದಿಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದೆ.
ತನಿಖೆಯಲ್ಲಿ ಮೃತ ಜೀವಾ ಡೆತ್ ನೋಟ್ ನಲ್ಲಿ ಆರೋಪಿಸಿರುವ ಬಹುತೇಕ ಎಲ್ಲಾಂಶಗಳು ಸಾಬೀತಾಗಿವೆ ಎಂದು ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.